ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮೀಪದ ಆದರಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿನ ಮಕ್ಕಳು ಹಲವಾರು ವರ್ಷಗಳಿಂದ ನೀರು ದೊರೆಯದೆ ಸಮಸ್ಯೆ ಎದುರಿಸುತ್ತಿದ್ದು, ಅತಿ ಹೆಚ್ಚು ಮಕ್ಕಳ ಸಂಖ್ಯೆಯನ್ನು ಹೊಂದಿದ ಈ ಶಾಲೆಗೆ ಇದೀಗ ಅಧಿಕಾರಿಗಳು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಸೇರಿ ಸುಮಾರು ೭೫-೮೦ ಸಾವಿರ ರೂ ವೆಚ್ಚದಲ್ಲಿ ಬೋರ್ವೆಲ್ ಹಾಕಿಸುವ ಮೂಲಕ ಬಹುದಿನಗಳ ನೀರಿನ ಸಮಸ್ಯೆಗೆ ಅಂತ್ಯ ಹಾಡಿ ಮಾದರಿ ಕಾರ್ಯ ಮಾಡಿದ್ದಾರೆ.
ಆದರಳ್ಳಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಸುಮಾರು ೬೧೦ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ೨೦ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಬಿಸಿಯೂಟಕ್ಕಾಗಿ ಅಡುಗೆ ತಯಾರಕರು ನಿತ್ಯ ೮೦ ಕೊಡಗಳಷ್ಟು ನೀರನ್ನು ತಳ್ಳುಗಾಡಿಯ ಮೇಲೆ ತರುತ್ತಿದ್ದರು. ನಿತ್ಯದ ಉಪಯೋಗಕ್ಕಾಗಿ ಗ್ರಾಮದ ಹೊರಗಿನಿಂದ ನೀರು ತರುವಂತಾಗಿತ್ತು. ಬಿಸಿಯೂಟ, ಕುಡಿಯುವ ನೀರು ಹಾಗೂ ದಿನಬಳಕೆಗಾಗಿ ನೀರಿನ ಸಮಸ್ಯೆ ದಶಕಗಳಿಂದಲೂ ಇದ್ದು, ಗ್ರಾ.ಪಂಗೆ ಅನೇಕ ಬಾರಿ ಮನವಿ ಕೊಟ್ಟರೂ ಸ್ಪಂದನೆ ದೊರೆಯದೆ ಸಮಸ್ಯೆ ಹಾಗೆಯೇ ಮುಂದುವರೆದಿತ್ತು.
ಈ ಸಮಸ್ಯೆಯನ್ನು ಅರಿತ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಆದರಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ ನಂದೆಣ್ಣವರ, ಸಿಆರ್ಪಿ ಗಿರೀಶ ನೇಕಾರ, ಶಾಲಾ ಶಿಕ್ಷಕರು, ಎಸ್ಡಿಎಮ್ಸಿ ಪದಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಅಕ್ಷರ ದಾಸೋಹ ನಿರ್ದೇಶಕರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಬೋರ್ವೇಲ್ ಕೊರೆಯಿಸಲು ನಿರ್ಧರಿಸಿ, ಎಲ್ಲರೂ ಸೇರಿ ಸುಮಾರು ೭೫-೮೦ ಸಾವಿರ ರೂಗಳನ್ನು ವೆಚ್ಚ ಮಾಡಿ ಬೋರ್ವೆಲ್ ಕೊರೆಯಿಸಿದ್ದಾರೆ.
ಎಲ್ಲರ ಪ್ರಾಮಾಣಿಕ, ನಿಸ್ವಾರ್ಥ ಸೇವೆಯ ಪ್ರಯತ್ನದ ಫಲವಾಗಿ ೨-೩ ಇಂಚಿನಷ್ಟು ಸಿಹಿ ನೀರು ದೊರೆಕಿದ್ದು, ನೀರು ದೊರಕಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಒಟ್ಟಿನಲ್ಲಿ ಶಾಲೆಗೆ ನೀರು ಬರುವಂತೆ ಮಾಡಿದ್ದು, ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಹರ್ಷ ಮೂಡಿಸಿದೆ. ಅಧಿಕಾರಿಗಳ ಆಸಕ್ತಿ ಗ್ರಾಮಸ್ಥರ ಸಹಕಾರ ಇದ್ದರೆ ಎಲ್ಲ ಕೆಲಸಗಳನ್ನು ಸರಳವಾಗಿ ನಿಭಾಯಿಸಬಹುದು ಎನ್ನುವದಕ್ಕೆ ಈ ಕಾರ್ಯ ಸಾಕ್ಷಿಯಾಗಿದೆ.
ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದ್ದು, ನಿತ್ಯ ನೀರಿನ ಸಮಸ್ಯೆ ಇರುವ ಬಗ್ಗೆ ಅನೇಕ ಬಾರಿ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಎಸ್ಡಿಎಂಸಿಯವರು, ಮುಖ್ಯೋಪಾಧ್ಯಾಯರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಸಮಸ್ತ ಜನರು ಸಹಕಾರ ನೀಡಿ ಬೋರ್ವೆಲ್ ಹಾಕಿಸಿದ್ದು ಮಕ್ಕಳಿಗೆ ಇದು ಅನುಕೂಲವಾಗಲಿದೆ. ಇಂತಹ ಉಪಯೋಗಿ ಕಾರ್ಯಗಳು ಇನ್ನಷ್ಟು ನಡೆಯಬೇಕಿದೆ.
-ಕೃಷ್ಣಪ್ಪ ಧರ್ಮರ.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಲಕ್ಮೇಶ್ವರ



