ಬೆಂಗಳೂರು: ಸಾಕುಪ್ರಾಣಿಗಳ ಮಾಲೀಕರು ಮತ್ತು ಪ್ರಾಣಿಗಳ ನಡುವಿನ ಪ್ರೀತಿಯ ಕಥೆಗಳನ್ನು ಕೇಳಿರುತ್ತೀರಿ. ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಒಡನಾಡಿಗಳಂತೆ ಸಾಕುತ್ತಾರೆ. ಅದಕ್ಕೆ ಬೇಕಾಗಿರುವ ವಸ್ತುಗಳನೆಲ್ಲಾ ಕೊಡಿಸುತ್ತಾರೆ. ಅಷ್ಟರ ಮಟ್ಟಿಗೆ ಪ್ರಾಣಿ ಪ್ರೀತಿ ಬೆಳೆಸಿದವರೂ ಇದ್ದಾರೆ. ಆದರೆ ಕೆಲಮೊಮ್ಮೆ ಪ್ರೀತಿಯಿಂದ ಸಾಕಿದ ಸಾಕು ಪ್ರಾಣಿ ಸಾವಿಗೀಡಾದರೆ ಅದನ್ನು ಕಂಡು ದುಃಖ ಹೊರಹಾಕುವ ಮಾಲೀಕರನ್ನು ನೋಡುವುದೇ ಕಷ್ಟ.
ಏಕೆಂದರೆ ತನ್ನವರನ್ನೇ ಕಳೆದುಕೊಂಡ ಭಾವ ಅವರಿಗಾಗುತ್ತದೆ. ಅದರಂತೆ ಮಾಲೀಕನೋರ್ವ ತನ್ನ ಮುದ್ದಿನ ಸಾಕು ನಾಯಿ ಸಾವನ್ನಪ್ಪಿರುವ ಬೇಸರದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರ ಗ್ರಾಮದಲ್ಲಿ ನಡೆದಿದೆ. ರಾಜಶೇಖರ್ (35) ಮೃತ ಯುವಕನಾಗಿದ್ದು,
9 ವರ್ಷದ ಹಿಂದೆ ಜರ್ಮನ್ಶೆಫರ್ಡ್ ತಳಿಯ ನಾಯಿಯನ್ನು ಖರೀದಿಸಿ ತಂದಿದ್ದನು. ಅದಕ್ಕೆ ‘ಬೌನ್ಸಿ’ ಎಂದು ನಾಮಕರಣ ಮಾಡಿದ್ದನು. ಅತ್ಯಂತ ಪ್ರೀತಿಯಿಂದ ನಾಯಿಯನ್ನು ಸಾಕಿದ್ದನು . ಆದರೆ ನಿನ್ನೆ ಬೌನ್ಸಿ ಅನಾರೋಗ್ಯದಿಂದ ಮೃತಪಟ್ಟಿತ್ತು.
ಮೃತ ಪಟ್ಟ ಹಿನ್ನಲೆಯಲ್ಲಿ ತೀವ್ರ ದುಖಃದಲ್ಲಿದ್ದ ರಾಜಶೇಖರ್ ತನ್ನ ಜಮೀನಿನಲ್ಲೆ ನಾಯಿಯ ಅಂತ್ಯಸಂಸ್ಕಾರ ಮಾಡಿ ಮುಗಿಸಿ ಮನೆಗೆ ಬಂದಿದ್ದನು. ಆದರೆ ಇಂದು ತನ್ನ ಮನೆಯಲ್ಲಿಯೆ ನಾಯಿಗೆ ಬಳಸುತ್ತಿದ್ದ ಚೈನ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



