ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠದ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಿ, ಕ್ರಿಯಾಶೀಲಗೊಳಿಸಲು ಹಿರಿಯ ಕನ್ನಡ ಪ್ರಾಧ್ಯಪಕ ಹಾಗೂ ಜೈನ ಧರ್ಮದ ವಿದ್ವಾಂಸ ಡಾ. ಜಿನದತ್ತ ಹಡಗಲಿ ಅವರನ್ನು ಸಂಯೋಜಕರನ್ನಾಗಿ ನೇಮಿಸಿ, ಕವಿವಿ ಕುಲಪತಿಗಳು ಆದೇಶಿಸಿದ್ದು, ಎಪ್ರಿಲ್ 17ರಂದು ಡಾ. ಜಿನದತ್ತ ಹಡಗಲಿ ಕರ್ತವ್ಯ ವಹಿಸಿಕೊಂಡರು.
ಸುಮಾರು 33 ವರ್ಷಕ್ಕೂ ಹೆಚ್ಚು ಅವಧಿಗೆ ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ ಅಧ್ಯಯನ ಮತ್ತು ಬೋಧನೆಯಲ್ಲಿ ಅಪಾರ ಅನುಭವ, ಶೈಕ್ಷಣಿಕ ಕಳಕಳಿ ಹೊಂದಿರುವ ಡಾ. ಜಿನದತ್ತ ಹಡಗಲಿ ಅವರನ್ನು ಸಂಯೋಜಕರಾಗಿ ನಿಯೋಜನೆ ಮಾಡಲಾಗಿದ್ದು, ಅಧ್ಯಯನ ಪೀಠದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.
ಡಾ. ಜಿನದತ್ತ ಹಡಗಲಿ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ನ ಅಧ್ಯಕ್ಷರಾಗಿ, ಜೆಎಸ್ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಧಾರವಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಪಾರ ಅನುಭವ ಹೊಂದಿದ್ದಾರೆ.
ನಿಕಟಪೂರ್ವ ಸಂಯೋಜಕರಾದ ಡಾ. ಮಲ್ಲಿಕಾರ್ಜುನ ಪಾಟೀಲ್ ಅವರು ಡಾ. ಜಿನದತ್ತ ಹಡಗಲಿಯವರಿಗೆ ಪೀಠದ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ನ ಉಪಾಧ್ಯಕ್ಷ ಡಾ. ಭರಮಪ್ಪ ಭಾವಿ, ಪ್ರಧಾನ ಕಾರ್ಯದರ್ಶಿ ಶಾಂತಿನಾಥ ಹೋತಪೇಟಿ, ಕಾರ್ಯದರ್ಶಿ ಶಾಂತರಾಜ ಮಲ್ಲಸಮುದ್ರ, ನಿರ್ದೇಶಕರಾದ ಧರಣೇಂದ್ರ ಜವಳಿ, ಶ್ರೀಧರ ಬಸ್ತಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಆರ್.ಎ. ಬಾಳಿಕಾಯಿ, ಡಾ. ವೀರಪ್ಪ ಪೂಜಾರ, ಬಸಲಿಂಗಪ್ಪ ಅರವಳದ, ಧನಪಾಲ ಜೆ.ಮುನ್ನೊಳ್ಳಿ, ಸುಕುಮಾರ ಕೊಕಟನೂರ, ಜೈನ ಅಧ್ಯಯನ ಪೀಠದ ಉಪನ್ಯಾಸಕರು, ಸಿಬ್ಬಂದಿಗಳು, ಜೈನ ಧರ್ಮದ ಅಭಿಮಾನಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ನ ಗೌರವಾಧ್ಯಕ್ಷ ಡಾ. ಅಜಿತ್ ಪ್ರಸಾದ ಅವರು ಡಾ. ಜಿನದತ್ತ ಹಡಗಲಿ ಅವರಿಗೆ ಅಭಿನಂದಿಸಿ ಶುಭ ಕೋರಿದ್ದಾರೆ.



