ವಿಜಯಸಾಕ್ಷಿ ಸುದ್ದಿ, ಧಾರವಾಡ: ಬೆಂಗಳೂರಿನ ನಬಾರ್ಡ್ ಕ್ಷೇತ್ರೀಯ ಕಾರ್ಯಲಯದಲ್ಲಿ ನಬಾರ್ಡ್ 44 ಸಂಸ್ಥೆ ದಿನಾಚರಣೆ ಅಂಗವಾಗಿ ಸ್ವಾವಲಂಬಿ ಒಕ್ಕೂಟಗಳು ಆಯೋಜಿಸಿದ್ದ ಕೈ ಕುಸುರಿ ಹಾಗೂ ಕೈಮಗ್ಗ ವಸ್ತುಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದ ಧಾರವಾಡದ ಸ್ವಾವಲಂಬಿ ಸಖಿ ಒಕ್ಕೂಟ ತಯಾರಿಸಿದ ಅದ್ಭುತವಾದ ಆರಿ ಕಸೂತಿ ಉತ್ಪನ್ನಗಳಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜಿನೀಶ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಆರಿ ಕಲೆಯು, ಕಾಶ್ಮೀರದಲ್ಲಿ ಹುಟ್ಟಿಕೊಂಡಿದ್ದರೂ ನಮ್ಮ ಧಾರವಾಡದ ಮಹಿಳೆಯರು ಅದನ್ನು ವಿವಿಧ ಉತ್ಪನ್ನಗಳಿಗೆ ಅಳವಡಿಸಿಕೊಂಡು ಬಹಳಷ್ಟು ಕಲಾತ್ಮಕ ವಸ್ತುಗಳನ್ನು ತಯಾರಿಸಿದ್ದಾರೆ. ಇದುವರೆಗೆ 1.85 ಕೋಟಿಯ ವ್ಯವಹಾರ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ಸೂಚಿಸಿದರು.
ಅವರು ಖಣದ ಬಟ್ಟೆ ಮತ್ತು ಆರಿ ಕಲೆಯನ್ನು ನವೀಕರಿಸಿ ಅದರಿಂದ ಆಭರಣಗಳು, ಬ್ಯಾಗುಗಳು, ಮಕ್ಕಳ ಉಡುಪುಗಳು, ಲೆಹೆಂಗಾ ಬ್ಲೌಸ್ ಇತ್ಯಾದಿ ಉಡುಪುಗಳನ್ನು ತಯಾರಿಸಿದ್ದಾರೆ. ಹುಬ್ಬಳ್ಳಿಯ ಶಿರೂರ ಪಾರ್ಕ್ ಹತ್ತಿರ ಇವರು ಒಂದು ಮಳಿಗೆಯನ್ನು ತೆರೆದು, ಸದರಿ ಉತ್ಪನ್ನಗಳ ಮಾರಾಟವನ್ನು ಉತ್ತಮವಾಗಿ ಕೈಗೊಂಡಿದ್ದಾರೆ.
2021ರಲ್ಲಿ ಧಾರವಾಡ ಜಿಲ್ಲೆಯಲ್ಲಿ ನಬಾರ್ಡ್ ಸಹಭಾಗಿತ್ವದಲ್ಲಿ 350 ಸದಸ್ಯರನ್ನು ಒಳಗೊಂಡು ಈ ಕಂಪನಿ ಪ್ರಾರಂಭಿಸಿದರು. 9 ಜನ ಮಹಿಳಾ ನಿರ್ದೇಶಕರು ಈ ಕಂಪನಿಯನ್ನು ಬಲಿಷ್ಠವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಆರು ಘಟಕಗಳಿದ್ದು, ಆರಿಬ್ಯಾಗ್ ಯೂನಿಟ್, ಎಥನಿಕ್ ವೇರ್, ಲಾಂಜ್ ವೇರ, ಫ್ರೇಮ್ ಯುನಿಟ್, ಜ್ಯುವೆಲರಿ ಯೂನಿಟ್, ಕುರ್ತಿ ಯೂನಿಟ್ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ನಬಾರ್ಡ್ನ ಚೀಫ್ ಜನರಲ್ ಮ್ಯಾನೇಜರ್ ಡಾ. ಸುರೇಂದ್ರ ಬಾಬು ಗುಪ್ತಾ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೀಜನಲ್ ಡೈರೆಕ್ಟರ್ ಡಾ. ಸೋನಾಲಿ ಸೇನ್, ಕೆನರಾ ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಭವೇಂದ್ರ ಕುಮಾರ್, ಧಾರವಾಡ ನಬಾರ್ಡ್ನ ಸಹಾಯಕ ಮಹಾ ಪ್ರಬಂಧಕ ಮಯೂರ ಕಾಂಬ್ಳೆ, ಸ್ವಾವಲಂಬಿ ಸಖಿ ಒಕ್ಕೂಟದ ಸರ್ವಮಂಗಳ ಮೊತಿ, ವಿಜಯ ಮುದಿಗೌಡರ ಮತ್ತು ಅಕ್ಷತಾ ಎಫ್ ಇದ್ದರು.
ಈ ಚಟುವಟಿಕೆಗಳಿಗೆ ನಬಾರ್ಡ್ ಬ್ಯಾಂಕ್ ಆರ್ಥಿಕವಾಗಿ ಹಾಗೂ ತರಬೇತಿಗಳಿಗೆ ಸಹಾಯವನ್ನು ನೀಡುವ ಮೂಲಕ ಮಹಿಳೆಯರಿಗೆ ಆಧಾರವಾಗಿ ನಿಂತಿದೆ. ಸ್ವಾವಲಂಬಿ ಮಹಿಳೆಯರ ಈ ಕಥೆಯು ಎಲ್ಲ ಮಹಿಳೆಯರಿಗೂ ಸ್ಪೂರ್ತಿಯಾಗಲಿ ಎಂದು ಡಾ. ಶಾಲಿನಿ ರಜನೀಶ್ ಶುಭ ಹಾರೈಸಿದರು.



