ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸಮರ್ಪಕ ನೀರು ಪೂರೈಕೆಯಲ್ಲಿ ಪುರಸಭೆ ಪದೇ ಪದೇ ವಿಫಲವಾಗುತ್ತಿದ್ದು, 25-30 ದಿನಗಳಿಂದ ನೀರು ಪೂರೈಕೆಯಾಗದಿರುವದನ್ನು ಪ್ರತಿಭಟಿಸಿ ಹತ್ತಾರು ಮಹಿಳೆಯರು ಪುರಸಭೆ ಎದುರಿನಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.
ಪುರಸಭೆಯ 3ನೇ ವಾರ್ಡಿನ ಪಾಣಿಗಟ್ಟಿ ಓಣಿ ಮತ್ತು ಬೇವಿನಮರದ ಓಣಿಯವರು ನೀರು ಪೂರೈಸುವಂತೆ ಆಗ್ರಹಿಸಿ, ಕಳೆದ ಒಂದು ತಿಂಗಳಿಂದ ನಮ್ಮ ಭಾಗದಲ್ಲಿ ಕುಡಿಯುವ ನೀರು ಸರಬರಾಜಾಗಿಲ್ಲ. ದಿನ ಬೆಳಗಾದರೆ ಸವಳು ನೀರಿಗಾಗಿ ಕೊಡ ಹಿಡಿದು ಅಲೆಯುವುದು ತಪ್ಪಿಲ್ಲ. ಮಳೆಗಾಲ, ನದಿ ತುಂಬಿ ಹರಿಯುತ್ತಿದೆ ಆದರೂ ಪುರಸಭೆ ಆಡಳಿತ ಮಂಡಳಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಸಿಹಿ ನೀರು ಮರೀಚಿಕೆಯಾಗಿದೆ. ರೈತರು, ಕೂಲಿ ಕಾರ್ಮಿಕರು, ಬಡ, ಮಧ್ಯಮ ವರ್ಗದ ಜನರೇ ಹೆಚ್ಚಾಗಿರುವ ಈ ಓಣಿಗಳಲ್ಲಿ ಟ್ಯಾಂಕರ್ ನೀರು ಹಾಕಿಕೊಳ್ಳುವುದು ದುಸ್ತರವಾಗುತ್ತದೆ. ಕೂಡಲೇ ನೀರು ಪೂರೈಸದಿದ್ದರೆ ಪುರಸಭೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಪದೇ ಪದೇ ಪೈಪ್ಲೈನ್ ದುರಸ್ತಿ, ವಿದ್ಯುತ್ ಸಮಸ್ಯೆಯಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಹೊಸ ಪೈಪ್ಲೈನ್ ಕಾಮಗಾರಿ ಪ್ರಾರಂಭವಾಗಲಿದ್ದು, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸುವದಾಗಿ ಭರವಸೆ ನೀಡಿದರು.
ಈ ವೇಳೆ ಈಶಪ್ಪ ರೋಣದ, ಗಣೇಶ ನೂಲ್ವಿ, ಸೋಮಶೇಖರ ಕರೆಯತ್ತಿನ, ಬಸವರಾಜ ನಾಗಲೂಟಿ, ಸುರೇಶ ಶಿರಹಟ್ಟಿ, ಬಸಣ್ಣ ರೋಣದ, ನಿರ್ಮಲಾ ಪಾಣಿಗಟ್ಟಿ, ಲಕ್ಷ್ಮೀ ಪಾಣಿಗಟ್ಟಿ, ನಿರ್ಮಲಾ ಸಾಲಮನಿ, ಮಂಜವ್ವ ಪಾಣಿಗಟ್ಟಿ, ಶಿವಮ್ಮ ಪಾಣಿಗಟ್ಟಿ, ರೂಪಾ ನೀಲಪ್ಪಗೌಡ್ರ ಮುಂತಾದವರಿದ್ದರು.



