ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಈ ಭಾಗದ ಜನರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಯುವ ಮುಖಂಡ, ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಪೌರಾಡಳಿತ ಸಚಿವ ರಹೀಂ ಖಾನ್ ಅವರನ್ನು ಆಗ್ರಹಿಸಿದ್ದಾರೆ.
ಇತ್ತಿಚೇಗೆ ರಾಜ್ಯ ಸರ್ಕಾರದ ಹಜ್ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರನ್ನು ಭೇಟಿ ಮಾಡಿದ್ದ ಅವರು, ಪಟ್ಟಣದ ಪುರಸಭೆಯು ರಚನೆಯಾದ ವೇಳೆಯಲ್ಲಿ ಇದ್ದ ಪಟ್ಟಣದ ವ್ಯವಸ್ಥೆ ಮತ್ತು ಜನಸಂಖ್ಯೆ ಹಾಗೂ ಇದೀಗ ಅಭಿವೃದ್ಧಿ ಕಂಡಿರುವ ಪಟ್ಟಣದ ಸ್ಥಿತಿಗಳ ಅವಲೋಕನವನ್ನು ಸಚಿವರಿಗೆ ವಿವರಿಸಿದರು.
ಐತಿಹಾಸಿಕ ಮತ್ತು ಭೌಗೋಳಿಕವಾಗಿ ವಿಶಿಷ್ಟ ಹಿನ್ನೆಲೆ ಇರುವ ಲಕ್ಷ್ಮೇಶ್ವರ ಪಟ್ಟಣ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿದೆ. ಗದಗ ಜಿಲ್ಲೆಯಲ್ಲಿ ಎರಡನೇ ದೊಡ್ಡ ಪಟ್ಟಣವಾಗಿದ್ದು, ಜನಸಂಖ್ಯೆ ಹೆಚ್ಚಳದಿಂದ ಜನಸಾಂದ್ರತೆಯೂ ಕೂಡ ಹೆಚ್ಚಿದೆ. ಅಷ್ಟೇ ಅಲ್ಲದೇ ಸುತ್ತಲಿನ ಪ್ರದೇಶಗಳ ವ್ಯಾಪಾರ-ವಹಿವಾಟುಗಳಿಗೆ ಕೇಂದ್ರ ಸ್ಥಾನವೂ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಅವಕಾಶಗಳಿವೆ. ಪಟ್ಟಣವು ಎಲ್ಲ ವಿಷಯಗಳಲ್ಲಿ ಬೆಳವಣಿಗೆ ಕಾಣುತ್ತಿದ್ದು, ಪುರಸಭೆಯಿಂದ ನಗರಸಭೆಯಾಗಿ ಮಾರ್ಪಟ್ಟರೆ ಸರಕಾರದ ಅನುದಾನ, ಸೌಲಭ್ಯಗಳು ದೊರಕಿ ಇನ್ನೂ ಹೆಚ್ಚಿನ ಅನೂಕೂಲತೆಗಳನ್ನು ಜನರಿಗೆ ತಲುಪಿಸಬಹುದಾಗಿದೆ. ಸರಕಾರದ ಮಟ್ಟದಲ್ಲಿ ಈ ಕುರಿತು ಚರ್ಚೆ ನಡೆಸಿ ನಗರಸಭೆಯನ್ನಾಗಿ ಮಾಡಲು ಕ್ರಮ ವಹಿಸುವಂತೆ ಸಚಿವರಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದ್ದಾರೆ.



