ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ನೀಡಿದ ಆದೇಶವನ್ನು ರಾಜ್ಯದ ಹೈಕೋರ್ಟ್ ರದ್ದು ಮಾಡಿದೆ. ಜನೌಷಧಿ ಕೇಂದ್ರಗಳನ್ನು ಮತ್ತೆ ತೆರೆಯಲು ಸೂಚಿಸಿರುವುದನ್ನು ಸ್ವಾಗತಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿಗಳು ಇನ್ನಾದರೂ ದ್ವೇಷದ ರಾಜಕಾರಣವನ್ನು ಬದಿಗಿಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಇದರಿಂದ ರಾಜ್ಯಕ್ಕೆ ಮತ್ತು ಬಡವರಿಗೆ ಒಳ್ಳೆಯದಾಗುತ್ತದೆ. ಇರುವಷ್ಟು ದಿನ ಉತ್ತಮ ಹೆಜ್ಜೆ ಇಡಲಿ ಎಂದು ಅವರು ವಿನಂತಿಸಿದರು.
ಜನೌಷಧಿ ಕೇಂದ್ರಗಳು ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ಕಾರ್ಯಕ್ರಮ, ಒಂದು ಕೊಡುಗೆ. ಈ ರಾಜ್ಯದ, ದೇಶದ ಬಡಜನರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ಸಿಗಬೇಕು; ಇದರಿಂದ ಬಡವರಿಗೆ ಅನುಕೂಲ ಆಗಬೇಕೆಂಬ ಸದುದ್ದೇಶದಿಂದ ಆ ಕಾರ್ಯಕ್ರಮ ಜಾರಿಗೊಳಿಸಿದ್ದರು ಎಂದು ವಿವರಿಸಿದರು.
ಮೋದಿಜೀ ಅವರ ಜನಪ್ರಿಯತೆ ಸಹಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ..
ರಾಜ್ಯದ ಕಾಂಗ್ರೆಸ್ ಸರಕಾರ, ಸಿದ್ದರಾಮಯ್ಯನವರಿಗೆ ಮೋದಿಜೀ ಅವರ ಜನಪ್ರಿಯತೆ ಸಹಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಅಹಿಂದ ಮುಖ್ಯಮಂತ್ರಿ ಎಂದು ಬೊಬ್ಬೆ ಹೊಡೆಯುವ ಸಿದ್ದರಾಮಯ್ಯನವರು ಒಬ್ಬ ಹಿಂದುಳಿದ ಸಮುದಾಯಕ್ಕೆ ಸೇರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ಕೇಂದ್ರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಕೊಟ್ಟಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಪ್ರಥಮ ಬಾರಿಗೆ ಸತತವಾಗಿ 3ನೇ ಬಾರಿಗೆ ಪ್ರಧಾನಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೊಟ್ಟಿರುವ ಬಡವರ ಯೋಜನೆಗೆ ಕಲ್ಲು ಹಾಕುವ ಷಡ್ಯಂತ್ರ, ಹುನ್ನಾರ ಸಿದ್ದರಾಮಯ್ಯನವರ ಸರಕಾರದ್ದಾಗಿತ್ತು ಎಂದು ಟೀಕಿಸಿದರು.



