ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠಕ್ಕೆ ಚನ್ನಬಸವ ಶ್ರೀಗಳನ್ನು ನೇಮಕ ಮಾಡಲಾಗಿದೆ ಎಂದು ಸರ್ವಧರ್ಮ ಸಮನ್ವಯ ಪೀಠದ ಮುಖ್ಯ ಪೀಠಾಧಿಪತಿಗಳು ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಮಾಗಡಿ ವಿರಕ್ತಮಠದ ಶಿವಮೂರ್ತಿ ಶ್ರೀಗಳು ಹೇಳಿದರು.
ಅವರು ಸೋಮವಾರ ಶ್ರೀಗಳ ಪುರ ಪ್ರವೇಶದ ನಿಮಿತ್ತ ಹಮ್ಮಿಕೊಂಡಿದ್ದ 510 ಮಹಿಳೆಯರಿಂದ ಆರತಿ ಹಾಗೂ ಶ್ರೀಗಳ ಪುರ ಪ್ರವೇಶದ ಸಾರೋಟ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಮಾರನಬಸರಿ ಗ್ರಾಮ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಗ್ರಾಮದಲ್ಲಿನ ಸರ್ವ ಜನಾಂಗದವರು ಏಕತೆ ಮತ್ತು ಸಹೋದರತೆಯಿಂದ ಜೀವನ ನಡೆಸುತ್ತಿರುವುದು ನಾಡಿಗೆ ಮಾದರಿಯಾಗಿದೆ. ಇಂತಹ ಗ್ರಾಮದಲ್ಲಿ ಸಿದ್ದನಕೊಳ್ಳದ ಶಿದ್ದಯ್ಯಜ್ಜನವರು ಜನ್ಮ ತಾಳಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಕಾಯಕವೇ ಕೈಲಾಸ ಎಂಬ ತತ್ವವನ್ನು ನಂಬಿಕೊಂಡು ಬದುಕು ನಡೆಸುವ ಗ್ರಾಮ ಮಾರನಬಸರಿ ಎಂದರು.
ಮಾರನಬಸರಿ ಗ್ರಾಮ ಇನ್ನುಮುಂದೆ ಸುಕ್ಷೇತ್ರ ಮಾರನಬಸರಿ ಗ್ರಾಮವಾಗಿ ಗೋಚರವಾಗಲಿದೆ. ಮುಖ್ಯವಾಗಿ ಈಗಿನ ಪೀಠಾಧಿಪತಿಗಳಾದ ಚನ್ನಬಸವ ಶ್ರೀಗಳು ಸಹ ಎಲ್ಲ ಧರ್ಮಗಳ ಜನರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದಾರೆ. ಕಾರಣ ಅವರು ಬಸವ ತತ್ವದ ಮೇಲೆ ನಂಬಿಕೆಯನ್ನು ಹೊಂದಿದವರು. ಜೊತೆಗೆ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಅಡಕವಾಗಿರಬೇಕು ಎಂಬುದನ್ನು ಅರಿತವರು. ಹೀಗಾಗಿ ಸರ್ವಧರ್ಮ ಸಮನ್ವಯ ಪೀಠ ಗ್ರಾಮಕ್ಕೆ ಬೆಳಕನ್ನು ಚೆಲ್ಲಲಿದೆ ಎಂದ ಅವರು, ಐದು ದಿನಗಳ ಕಾಲ ಕಲ್ಯಾಣ ದರ್ಶನ ಪ್ರವಚನ ಅದ್ಧೂರಿಯಾಗಿ ನಡೆದಿದ್ದು, ಶ್ರೀಗಳ ಪುರ ಪ್ರವೇಶಕ್ಕೆ ಮತ್ತಷ್ಟು ಮೆರಗು ನೀಡಿದೆ ಎಂದರು.
ಕೊಪ್ಪದ ಕ್ರಾಸ್ ರಸ್ತೆಯಲ್ಲಿನ ಕಾಳಿಕಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಶ್ರೀಗಳ ಪುರ ಪ್ರವೇಶ ಕಾರ್ಯಕ್ರಮ ಆರಂಭಗೊಂಡಿತು. ಸಾವಿರಾರು ಭಕ್ತರ ಸಂಗಮದಲ್ಲಿ ಚನ್ನಬಸವ ಶ್ರೀಗಳ ಸಾರೋಟ ಮೆರವಣಿಗೆ ಗ್ರಾಮಕ್ಕೆ ತಲುಪುತ್ತಿದ್ದಂತೆ ಎರಡು ಜೆಸಿಬಿ ಯಂತ್ರಗಳ ಮೂಲಕ ಭಕ್ತರು ಶ್ರೀಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಮನೆಗಳ ಮುಂದೆ ರಂಗೋಲಿ ಹಾಕಿ ಆರತಿ ಬೆಳಗುವ ಮೂಲಕ ಶ್ರೀಗಳನ್ನು ಬರಮಾಡಿಕೊಂಡರು. ಕೆಂಪಿನ ಸಿದ್ದವೃಷಭೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕುಂದಗೋಳದ ಬಸವಣ್ಣ ಅಜ್ಜನವರು, ಚಿಕೇನಕೊಪ್ಪದ ಶಾಂತವೀರ ಶರಣರು, ಅಭಿನವ ಪಂಚಾಕ್ಷರ ಶಿವಚಾರ್ಯರು, ಡಾ. ಶಿವಕುಮಾರ ಶ್ರೀಗಳು, ಶ್ರೀ ಗಂಗಾಧರ ದೇವರು ನೇತೃತ್ವ ವಹಿಸಿದ್ದರು.
ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಸಾವಿರಾರು ಭಕ್ತರು ಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾರನಬಸರಿ ಗ್ರಾಮಸ್ಥರ ಏಕತೆ ಮತ್ತು ಸೌಹಾರ್ದತೆಯನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಳ್ಳುತ್ತಿದ್ದೆ. ಆದರೆ ಶಿವಮೂರ್ತಿ ಶ್ರೀಗಳು ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ನಮಗೆ ಗ್ರಾಮದ ಇತಿಹಾಸವನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀಗಳು ಬಸವಣ್ಣನವರ ತತ್ವಗಳ ಮೇಲೆ ನಂಬಿಕೆ ಇಟ್ಟುಕೊಂಡವರು. ಎಲ್ಲ ಜನಾಂಗದವರ ಪ್ರೀತಿಯನ್ನು ಸಂಪಾದಿಸಿದ್ದಾರೆ. ಗ್ರಾಮದ ಸರ್ವಧರ್ಮ ಸಮನ್ವಯ ಪೀಠ ಮತ್ತಷ್ಟು ಎತ್ತರಕ್ಕೆ ಬೆಳದು ಭಕ್ತರ ಬಾಳಿನಲ್ಲಿ ಬೆಳಕು ಹರಿಸಲಿ.
-
ಹಜರತ್ ಸುಲೇಮಾನ ಶಾವಲಿ ದರ್ಗಾದ ಅಜ್ಜನವರು.
ರೋಣ.



