ಬೆಂಗಳೂರು: ನರೇಗಾ ಯೋಜನೆಗೆ ಸಂಬಂಧಿಸಿದ ಗ್ರಾಮಸಭೆಗಳ ಸೋಷಿಯಲ್ ಆಡಿಟ್ನಲ್ಲಿ 10 ಲಕ್ಷ 51 ಸಾವಿರ ದೂರುಗಳು ದಾಖಲಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಮನಬಂದಂತೆ ಕೆಲಸ ಮಾಡಿ ಕೇಂದ್ರ ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳುವ ವ್ಯವಸ್ಥೆ ಈ ಯೋಜನೆಯಲ್ಲಿ ಇತ್ತು ಎಂದು ಆರೋಪಿಸಿದರು.
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ, ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ–ಜಿ ರಾಮ್ ಜಿ) ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ಕರೆ ನೀಡಿರುವುದನ್ನು ಪ್ರಶ್ನಿಸಿದರು. “ಕಾಂಗ್ರೆಸ್ ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಆಧಾರದ ಮೇಲೆ ವಿಬಿ–ಜಿ ರಾಮ್ ಜಿ ವಿರುದ್ಧ ಹೋರಾಟಕ್ಕೆ ಕರೆ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.
ಗ್ರಾಮಸಭೆಗಳ ಸೋಷಿಯಲ್ ಆಡಿಟ್ನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 10.51 ಲಕ್ಷ ದೂರುಗಳು ಬಂದಿವೆ. “ನಮಗೆ ಕೂಲಿ ಸಿಕ್ಕಿಲ್ಲ, ನಮ್ಮಲ್ಲಿ ಕೆಲಸ ಆಗಿಲ್ಲ, ಹಣ ದೋಚಲಾಗಿದೆ” ಎಂಬ ಆರೋಪಗಳು ದೂರುಗಳಲ್ಲಿ ದಾಖಲಾಗಿವೆ. ಮೊಬೈಲ್ ಟ್ರ್ಯಾಕಿಂಗ್ ಮತ್ತು ಜಿಪಿಎಸ್ ವ್ಯವಸ್ಥೆ ಅಳವಡಿಸಿದರೆ ಸಮಸ್ಯೆ ಏನು ಎಂದು ಅವರು ಪ್ರಶ್ನಿಸಿದರು.
ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ ಕುರಿತು ಕಾಂಗ್ರೆಸ್ ಪಕ್ಷ 10ರಿಂದ ಹೋರಾಟ ನಡೆಸುವುದಾಗಿ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಜೋಶಿ, 20 ವರ್ಷಗಳ ಹಿಂದೆ ಈ ಯೋಜನೆ ರೂಪಿಸಿದಾಗ ವಿಕಸಿತ ಭಾರತ ಅಥವಾ ಆಸ್ತಿ ನಿರ್ಮಾಣದ ಪರಿಕಲ್ಪನೆ ಇರಲಿಲ್ಲ ಎಂದು ಹೇಳಿದರು.
ಆ ಸಮಯದಲ್ಲಿ ದೇಶದ ಮತ್ತು ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು. ವಿಕಸಿತ ಭಾರತವಾಗುವ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ದೀರ್ಘಾವಧಿಯ ಆಸ್ತಿಗಳು ಇರುವ ವಿಕಸಿತ ಗ್ರಾಮಗಳ ನಿರ್ಮಾಣ ಅಗತ್ಯವಿದೆ. ಇಲ್ಲವಾದರೆ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳು ಖಾಲಿಯಾಗುವ ಅಪಾಯವಿದೆ ಎಂದು ಹೇಳಿದರು.



