ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಿರಿ, ಮರುಪರಿಶೀಲನೆ ಮಾಡಿ ಎಂದು ಬಿಜೆಪಿಯಿಂದ ಅಧಿಕೃತ ತೀರ್ಮಾನ ಮಾಡಿ ಸದನದಲ್ಲಿ ನಿರ್ಣಯ ಮಂಡಿಸಿ, ಆನಂತರ ಜನರ ಮುಂದೆ ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಸೋಣ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲೆಸೆದರು.
ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಕುರಿತು ಚರ್ಚೆ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದಾಗ, ಶಿವಕುಮಾರ್ ಅವರು ತಿರುಗೇಟು ನೀಡಿದರು.
“ಸುರೇಶ್ ಅವರೇ ನೀವು ಹಿರಿಯ ನಾಯಕರಿದ್ದೀರಿ, ಮಾಜಿ ನಿಮ್ಮ ಜತೆ ಮಾಜಿ ಡಿಸಿಎಂ ಇದ್ದಾರೆ. ಈ ಅಭಿಪ್ರಾಯ ಕೇವಲ ನಿಮ್ಮ ವೈಯಕ್ತಿಕವಲ್ಲ. ಅದು ಪಕ್ಷದ ಅಭಿಪ್ರಾಯ. ನೀವು ಏನು ಹೇಳುವಿರೋ ಅದರ ಬಗ್ಗೆ ಚಿಂತನೆ ನಡೆಸೋಣ. ನೀವು ಹೇಳುತ್ತಿರುವುದು ಸರಿಯಿಲ್ಲ ಎಂದು ಹೇಳುತ್ತಿಲ್ಲ. ಈ ಬಜೆಟ್ ಅಧಿವೇಶನದ ಒಳಗೆಯೇ ನಿಮ್ಮ ತೀರ್ಮಾನ ತಿಳಿಸಿ” ಎಂದು ಹೇಳಿದರು.
ಕೋಳಿ ಕೇಳಿ ಖಾರ ಅರೆದಂತಿದೆ, ಗ್ಯಾರಂಟಿ ಕೊಡುವಾಗ ನಮ್ಮನ್ನು ನೀವು ಕೇಳಿದ್ರ ಎಂದು ಸುರೇಶ್ ಅವರು ಪ್ರತಿಕ್ರಿಯೆ ನೀಡಿದಾಗ, “ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಆದರೂ ಬಿಡುವುದಿಲ್ಲ ಎಂದು ಹೇಳಿದ್ದರು. ಆನಂತರ ಅದು ಕಡಿಮೆ ಆಯಿತು, ಇದು ಕಡಿಮೆ ಆಯಿತು ಎಂದವರು ನೀವು. ಅದಕ್ಕೆ ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ನಿಮ್ಮ ಮಾತನ್ನೂ ಕೇಳಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ” ಎಂದು ತಿರುಗೇಟು ನೀಡಿದರು.
“ಇತ್ತೀಚೆಗೆ ಅಸ್ಸಾಂ ರಾಜ್ಯಕ್ಕೆ ಹೋಗಿದ್ದೆ. ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಇಲ್ಲ. ಈಗ ಚಾಟ್ ಜಿಪಿಟಿಯಲ್ಲಿ ಹೌ ಟು ವಿನ್ ಗುಜರಾತ್ ಎಲೆಕ್ಷನ್ ಎಂದು ಹಾಕು, ಕರ್ನಾಟಕ ಮಾದರಿ ಅನುಸರಿಸಿ ಎಂದು ಬರಲಿಲ್ಲ ಎಂದರೆ ಕೇಳಿ. ಸರ್ಕಾರಿ ಅಧಿಕಾರಿಗಳಿಗೆ, ಉಳ್ಳವರಿಗೆ ಗ್ಯಾರಂಟಿ ಯೋಜನೆಗಳು ಬೇಕಿಲ್ಲ. ನಾವು ಒಂದು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ನೀವು ಒಂದು ತೀರ್ಮಾನಕ್ಕೆ ಬನ್ನಿ” ಎಂದರು.
ಮರುಚಿಂತನೆ ಮಾಡಿ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇ ಎಂದು ಸುರೇಶ್ ಗೌಡ ಅವರು ಹೇಳಿದಾಗ, “ಪಕ್ಕದಲ್ಲಿ, ಡಿನ್ನರ್ ಮೀಟಿಂಗ್, ಡೇ ಲೈಟ್ ಮೀಟಿಂಗ್ ಅಲ್ಲಿ, ಬೇರೆ, ಬೇರೆ ಮೀಟಿಂಗ್ ಅಲ್ಲಿ ಹೇಳಿರುವುದು ಬೇಡ. ನಿಮ್ಮ ತೀರ್ಮಾನವನ್ನ ವಿಧಾನಸಭೆ, ಜನ, ದೇಶ ನೋಡಬೇಕು” ಎಂದರು.



