HomeUncategorizedಕೆರೆಯಲ್ಲೇ ಕನಸು ಬಿತ್ತಿದ ಮಹಿಳೆಯರು

ಕೆರೆಯಲ್ಲೇ ಕನಸು ಬಿತ್ತಿದ ಮಹಿಳೆಯರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: DAY-NRLM ಸಂಜೀವಿನಿ ಯೋಜನೆಯಡಿ ಜಾರಿಗೊಂಡಿರುವ “ಮತ್ಸ್ಯ ಸಂಜೀವಿನಿ” ಯೋಜನೆ ಗದಗ ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಮಾದರಿಯಾಗಿದೆ. ಮೀನುಗಾರಿಕೆಯನ್ನು ಆಧಾರವಾಗಿಸಿಕೊಂಡು ಗ್ರಾಮೀಣ ಮಹಿಳೆಯರು ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದು, ಈಗ ಈ ಯೋಜನೆ ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿದೆ.

ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಬಾಪುರ ಗ್ರಾಮದ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮೀನು ಸಾಕಾಣಿಕೆ ಮೂಲಕ ಉತ್ತಮ ಆದಾಯ ಗಳಿಸಿ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಹಿಂದೆ ಕೂಲಿ ಕೆಲಸ ಹಾಗೂ ಅಲ್ಪ ಪ್ರಮಾಣದ ಕೃಷಿಯನ್ನೇ ನಂಬಿಕೊಂಡಿದ್ದ ಮಹಿಳೆಯರು ಇಂದು ತಮ್ಮದೇ ಆದ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವುದು ವಿಶೇಷ.

ಜಿಲ್ಲೆಯಾದ್ಯಂತ 16 ಗ್ರಾಮ ಪಂಚಾಯತ್ ಮಟ್ಟದ ಕೆರೆಗಳನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಗುತ್ತಿಗೆ ಪಡೆದು ಸ್ವಸಹಾಯ ಸಂಘಗಳ ಸದಸ್ಯರಿಗೆ ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದೇ ಯೋಜನೆಯಡಿ ಹಾತಲಗೇರಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ ಕೈಜೋಡಿಸಿ ಯಶಸ್ವಿ ಮೀನುಗಾರಿಕೆ ಮಾದರಿಯನ್ನು ನಿರ್ಮಿಸಿದೆ.

2025ರಲ್ಲಿ ಜಿಲ್ಲಾ ಪಂಚಾಯತ್ ಗದಗ ಜಿಲ್ಲಾ ಸಂಪನ್ಮೂಲ ಕೇಂದ್ರ, ಹುಲಕೋಟೆಯಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಮೂರು ದಿನಗಳ ವಸತಿ ಸಹಿತ ವಿಶೇಷ ತರಬೇತಿ ಆಯೋಜಿಸಲಾಗಿತ್ತು. ಮೀನು ಸಾಕಾಣಿಕೆಯ ವೈಜ್ಞಾನಿಕ ವಿಧಾನಗಳು, ಕೆರೆ ನಿರ್ವಹಣೆ, ಮೀನುಗಳ ಪೋಷಣೆ, ಆಹಾರ ವ್ಯವಸ್ಥೆ ಹಾಗೂ ಮಾರುಕಟ್ಟೆ ಸಂಪರ್ಕ ಕುರಿತು ಮಹಿಳೆಯರಿಗೆ ಸಮಗ್ರ ಮಾಹಿತಿ ನೀಡಲಾಯಿತು.

ತರಬೇತಿ ಬಳಿಕ ಅಮೃತ ಸರೋವರ ಯೋಜನೆಯಡಿ ನಿರ್ಮಿಸಲಾದ ಕೆರೆಯನ್ನು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗೆ ಪಡೆದುಕೊಂಡಿತು. ಬಳಿಕ ಸಂಘದ ಸದಸ್ಯರು ಮೀನುಗಾರಿಕೆ ಚಟುವಟಿಕೆಗೆ ಚಾಲನೆ ನೀಡಿದರು.

ಮೀನುಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಸುಮಾರು 12 ಸಾವಿರ ಕಟ್ಲಾ ಹಾಗೂ ರೋಹು ಮೀನು ಮರಿಗಳನ್ನು ಕೆರೆಗೆ ಬಿಡಲಾಯಿತು. ತಾಲೂಕು ಸಂಜೀವಿನಿ ಯೋಜನೆ ಅಧಿಕಾರಿಗಳು, ಕೃಷಿ ಸಖಿಯರು ಹಾಗೂ ಪಶು ಸಖಿಯರು ನಿರಂತರ ತಾಂತ್ರಿಕ ಸಲಹೆ ನೀಡಿದರು.

ಪ್ರತಿದಿನ ಕೆರೆಯ ನಿರ್ವಹಣೆ, ಮೀನುಗಳಿಗೆ ಆಹಾರ ಒದಗಿಸುವುದು ಹಾಗೂ ಬೆಳವಣಿಗೆಯ ಮೇಲ್ವಿಚಾರಣೆಯನ್ನು ಮಹಿಳೆಯರು ಸ್ವತಃ ನಿರ್ವಹಿಸಿದರು. ಸುಮಾರು ಎಂಟರಿಂದ ಒಂಬತ್ತು ತಿಂಗಳ ಪರಿಶ್ರಮದ ಬಳಿಕ ಮೊದಲ ಹಂತದ ಕೊಯ್ಲಿನಲ್ಲಿ ಸುಮಾರು 60 ಕೆ.ಜಿ. ಮೀನುಗಳನ್ನು ಸಂಗ್ರಹಿಸಲಾಯಿತು.

ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹65 ದರದಲ್ಲಿ ಮಾರಾಟವಾಗಿದ್ದು, ಮೀನುಗಳ ತೂಕ 700 ಗ್ರಾಂದಿಂದ 1 ಕೆ.ಜಿ.ವರೆಗೆ ಇತ್ತು. ಮೀನು ಮಾರಾಟದಿಂದ ಬಂದ ಆದಾಯ ಮಹಿಳೆಯರ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗಿದೆ.

“ಮತ್ಸ್ಯ ಸಂಜೀವಿನಿ” ಯೋಜನೆ ಕೇವಲ ಆದಾಯದ ಮೂಲವಾಗಿಲ್ಲ, ಮಹಿಳೆಯರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯ ಮನೋಭಾವ ಬೆಳೆಸಿದೆ. ಸಾರ್ವಜನಿಕ ಸಂಪನ್ಮೂಲವಾಗಿದ್ದ ಕೆರೆಯನ್ನು ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಬಳಸಿಕೊಂಡಿರುವುದು ಗ್ರಾಮೀಣ ಅಭಿವೃದ್ಧಿಯ ಮಾದರಿಯಾಗಿದೆ.

ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜ್ ಚಳ್ಳಜ್ಜಿಮನೆ, ಜಿಲ್ಲಾ ಪಂಚಾಯತ್ ವ್ಯವಸ್ಥಾಪಕರು (ಕೃಷಿ) ಮಡ್ಡೆಪ್ಪ ಮಲ್ಲಿಮಾರ್ ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಿದ್ದು ಬಿ. ಸತ್ಯಣ್ಣವರ ಅವರು ಯೋಜನೆಯ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ್ದು, ಯೋಜನೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

“ಹಿಂದೆ ನಮ್ಮ ಕುಟುಂಬದ ಆದಾಯ ತುಂಬಾ ಕಡಿಮೆಯಾಗಿತ್ತು. ಸಂಜೀವಿನಿ ಯೋಜನೆಯಡಿ ದೊರೆತ ತರಬೇತಿ ಮತ್ತು ಅವಕಾಶದಿಂದ ಮೀನುಗಾರಿಕೆಯನ್ನು ಕಲಿತು ಇಂದು ಸ್ವಂತ ಆದಾಯ ಗಳಿಸುತ್ತಿದ್ದೇವೆ. ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಅಗತ್ಯಗಳನ್ನು ಆತ್ಮವಿಶ್ವಾಸದಿಂದ ಪೂರೈಸುತ್ತಿದ್ದೇವೆ. ಮತ್ಸ್ಯ ಸಂಜೀವಿನಿ ಯೋಜನೆ ನಮ್ಮ ಬದುಕಿಗೆ ಹೊಸ ಬೆಳಕು ತಂದಿದೆ.”

ಶಿವಲೀಲಾ ಹರಿಜನ, ಸದಸ್ಯೆ, ಪ್ರಕೃತಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ, ಸಂಬಾಪುರ

ಮಹಿಳಾ ಸಬಲೀಕರಣಕ್ಕೆ ‘ಮತ್ಸ್ಯ ಸಂಜೀವಿನಿ’ ಮಾದರಿ

ಗ್ರಾಮೀಣ ಮಹಿಳೆಯರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಆರಂಭವಾದ “ಮತ್ಸ್ಯ ಸಂಜೀವಿನಿ” ಯೋಜನೆ ಇಂದು ಗದಗ ಜಿಲ್ಲೆಯಲ್ಲಿ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವ ಜೊತೆಗೆ ಸಾಮಾಜಿಕ ಗೌರವ ಮತ್ತು ಆತ್ಮಸ್ಥೈರ್ಯ ಬೆಳೆಸುವಲ್ಲಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!