ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಸ್ವಚ್ಛತೆ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಲಕ್ಕುಂಡಿ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡಿದ್ದು, ಗ್ರಾಮದಲ್ಲಿ ಮಿನಿ ಟ್ಯಾಂಕ್ಗಳ ಸ್ವಚ್ಛತೆ, ಪೈಪ್ಲೈನ್ ಹಾಗೂ ಕೊಳವೆಬಾವಿ ದುರಸ್ತಿ ಕಾರ್ಯವನ್ನು ಭರದಿಂದ ಆರಂಭಿಸಿದೆ.
ಕಳೆದ ಜೂನ್ 5ರಂದು ನಡೆದ ಗ್ರಾಮ ಸಭೆಯಲ್ಲಿ, ಪೈಪ್ಲೈನ್ ಮತ್ತು ಕೊಳವೆಬಾವಿ ದುರಸ್ತಿ ನಿರ್ಲಕ್ಷ್ಯದಿಂದ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮದ ಹೊರವಲಯ ಅಸ್ವಚ್ಛತೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಗ್ರಾಮ ಪಂಚಾಯಿತಿ ತುರ್ತು ಸಭೆ ನಡೆಸಿ ಕ್ರಮ ಕೈಗೊಂಡಿದೆ.
ಗ್ರಾಮದ ವಾರ್ಡ್, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಒಟ್ಟು 35 ಮಿನಿ ಟ್ಯಾಂಕ್ಗಳನ್ನು ಪಂಚಾಯಿತಿ ಸಿಬ್ಬಂದಿಯಿಂದ ಸ್ವಚ್ಛಗೊಳಿಸಿ ಸುಣ್ಣ ಹಚ್ಚುವ ಕಾರ್ಯ ಆರಂಭಿಸಲಾಗಿದೆ. ಜಂತ್ಲಿ-ಶಿರೂರು ರಸ್ತೆಯ ಕೊಳವೆಬಾವಿಯಿಂದ ನೀರು ಪೂರೈಕೆಯಾಗುವ ಪೈಪ್ಲೈನ್ಗಳ ದುರಸ್ತಿ ಕಾರ್ಯವೂ ಪ್ರಗತಿಯಲ್ಲಿದೆ.
ಕುಡಿಯುವ ನೀರಿನ ಟ್ಯಾಂಕ್ಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿ, ಸುಣ್ಣ-ಬಣ್ಣ ಬಳಿದು ಸುಂದರಗೊಳಿಸುತ್ತಿರುವ ಪಂಚಾಯಿತಿ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗ್ರಾಮದಲ್ಲಿ ಒಟ್ಟು 11 ವಾರ್ಡ್ಗಳಿದ್ದು, 1ರಿಂದ 5 ಹಾಗೂ 11ನೇ ವಾರ್ಡ್ಗಳಿಗೆ ಈಗಾಗಲೇ 2-3 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ 6ರಿಂದ 10ನೇ ವಾರ್ಡ್ಗಳಿಗೆ 8ರಿಂದ 12 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿರುವುದು ಗ್ರಾಮ ಸಭೆಯಲ್ಲಿ ಬೆಳಕಿಗೆ ಬಂದಿತ್ತು.

ಈ ಕುರಿತು ಮಾತನಾಡಿದ ಆಡಳಿತಾಧಿಕಾರಿ ಶರಣು ಗೋಗೇರಿ, ಹೆಚ್ಚು ಕುಟುಂಬಗಳಿರುವ 6ರಿಂದ 10ನೇ ವಾರ್ಡ್ನಲ್ಲಿ 35 ವಾಲ್ಗಳಿದ್ದು, ಇಲ್ಲಿ ಇಬ್ಬರು ವಾಲ್ಮನ್ಗಳನ್ನು ನೇಮಕ ಮಾಡಿ ಅವರಿಗೆ ನಿಗದಿತ ಸಮಯ ವಹಿಸಲಾಗಿದೆ. ಇನ್ನು ಮುಂದೆ ಕನಿಷ್ಠ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮಕ್ಕೆ ಪ್ರತಿದಿನ ಸುಮಾರು 9 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಪ್ರಸ್ತುತ ತುಂಗಭದ್ರಾ ನದಿ ಪಾತ್ರದಿಂದ 5 ಲಕ್ಷ ಲೀಟರ್ ನೀರು ಮಾತ್ರ ಲಭ್ಯವಾಗುತ್ತಿದೆ. ಉಳಿದ 4 ಲಕ್ಷ ಲೀಟರ್ ನೀರನ್ನು ಗ್ರಾಮದ ಕೊಳವೆಬಾವಿ ಸಂಪನ್ಮೂಲಗಳಿಂದ ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಿಡಿಒ ಡಾ. ಅಮೀರನಾಯಕ ಮಾಹಿತಿ ನೀಡಿದರು.
ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅನೈರ್ಮಲ್ಯ ತಪ್ಪಿಸಲು ಗ್ರಾಮದ ವಿವಿಧ ಭಾಗಗಳ ಮಿನಿ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ ಪರಿಸರ ಸುಂದರವಾಗಿಡುವ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.
“ಒಂದು ವಾರದೊಳಗೆ ಎಲ್ಲಾ ವಾರ್ಡ್ಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.”
ಶರಣು ಗೋಗೇರಿ



