HomeGadag Newsಒಂದು ಕರೆ, ಒಂದು ಲಿಂಕ್... ಖಾತೆ ಖಾಲಿ! ಸೈಬರ್ ವಂಚನೆಗೆ ಹೊಸ ಬ್ರೇಕ್

ಒಂದು ಕರೆ, ಒಂದು ಲಿಂಕ್… ಖಾತೆ ಖಾಲಿ! ಸೈಬರ್ ವಂಚನೆಗೆ ಹೊಸ ಬ್ರೇಕ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಒಂದು ಮೊಬೈಲ್ ಕರೆ… ಒಂದು ನಕಲಿ ಲಿಂಕ್… ಒಂದು ಒಟಿಪಿ…! ಸಾಕು, ಜೀವನಪೂರ್ತಿ ಕೂಡಿಟ್ಟ ಹಣ ಕ್ಷಣಾರ್ಧದಲ್ಲಿ ಖದೀಮರ ಖಾತೆಗೆ ಜಮೆಯಾಗುತ್ತದೆ. ಸೈಬರ್ ವಂಚಕರ ಕುತಂತ್ರಕ್ಕೆ ಬಲಿಯಾಗಿ ಸಾವಿರಾರು, ಲಕ್ಷಾಂತರ ರೂಪಾಯಿ ಕಳೆದುಕೊಂಡು ಕಣ್ಣೀರಿಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಇಂತಹ ಸಂತ್ರಸ್ತರಿಗೆ ಇದೀಗ ದೊಡ್ಡ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಜಾರಿಗೊಳಿಸಿದೆ.

ಸೈಬರ್ ವಂಚನೆಗೆ ಒಳಗಾದವರು ಪೊಲೀಸ್ ಠಾಣೆ, ಬ್ಯಾಂಕ್ ಹಾಗೂ ವಿವಿಧ ಕಚೇರಿಗಳ ಸುತ್ತ ಅಲೆದಾಡುವ ದಿನಗಳಿಗೆ ತೆರೆ ಬಿದ್ದಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಅಡಿಯಲ್ಲಿ ಜಾರಿಗೊಂಡಿರುವ ‘ಮನಿ ರಿಸ್ಟೋರೇಶನ್ ಮಾಡ್ಯೂಲ್’ ಮೂಲಕ ಸಂತ್ರಸ್ತರು ತಮ್ಮ ಫ್ರೀಜ್ ಆಗಿರುವ ಹಣವನ್ನು ಆನ್‌ಲೈನ್ ಮೂಲಕವೇ ಮರಳಿ ಪಡೆಯಬಹುದಾಗಿದೆ.

ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗದಗ ಜಿಲ್ಲಾ ಪೊಲೀಸರು ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸೈಬರ್ ವಂಚನೆಗೆ ಒಳಗಾದವರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ.

‘ಗೋಲ್ಡನ್ ಅವರ್’ನಲ್ಲಿ ದೂರು ಕೊಟ್ಟರೆ ಹಣ ಉಳಿಯುವ ಸಾಧ್ಯತೆ ಹೆಚ್ಚು

ಸೈಬರ್ ವಂಚನೆ ಪ್ರಕರಣಗಳಲ್ಲಿ ಮೊದಲ ಕೆಲವು ಗಂಟೆಗಳು ಅತ್ಯಂತ ಮಹತ್ವದ್ದಾಗಿವೆ. ಹಣ ಖಾತೆಯಿಂದ ವರ್ಗಾವಣೆಯಾದ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ, ವಂಚಕರು ಹಣವನ್ನು ಹಿಂಪಡೆಯುವ ಮುನ್ನವೇ ಅದನ್ನು ಫ್ರೀಜ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ತಡವಾದರೆ ಹಣ ಹಲವು ಖಾತೆಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದ್ದು, ಮರುಪಾವತಿ ಪ್ರಕ್ರಿಯೆ ಸಂಕೀರ್ಣವಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಂತ್ರಸ್ತರು ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ದಾಖಲಾಗಿರುವ ತಮ್ಮ ದೂರಿನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಬೇಕು. ನಂತರ 14 ಅಂಕಿಯ ದೂರು ಸಂಖ್ಯೆಯನ್ನು ನಮೂದಿಸಿ ಅಗತ್ಯ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕು.

ಪೊಲೀಸ್ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಫ್ರೀಜ್ ಆಗಿರುವ ಹಣವನ್ನು ನೇರವಾಗಿ ಸಂತ್ರಸ್ತರ ಖಾತೆಗೆ ವರ್ಗಾಯಿಸಲಾಗುತ್ತದೆ.

₹50 ಸಾವಿರದವರೆಗೆ ಎಫ್‌ಐಆರ್ ಅಗತ್ಯವಿಲ್ಲ

ಒಂದು ಖಾತೆಯಲ್ಲಿ ₹50 ಸಾವಿರದವರೆಗೆ ಹಣ ಫ್ರೀಜ್ ಆಗಿದ್ದರೆ ಪೊಲೀಸ್ ವರದಿ ಆಧಾರದ ಮೇಲೆ ಮರುಪಾವತಿ ಸಾಧ್ಯವಾಗುತ್ತದೆ. ಆದರೆ ₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಪ್ರಕರಣಗಳಲ್ಲಿ ಎಫ್‌ಐಆರ್ ಹಾಗೂ ಹೆಚ್ಚುವರಿ ಪರಿಶೀಲನೆ ಕಡ್ಡಾಯವಾಗಿರುತ್ತದೆ.

‘ನಿಮ್ಮ ಹಣ ಮರಳಿ ಕೊಡಿಸುತ್ತೇವೆ’ ಎಂದು ಕರೆ ಮಾಡುವ ಮಧ್ಯವರ್ತಿಗಳು ಹಾಗೂ ಖಾಸಗಿ ಏಜೆಂಟರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹಣ ಮರುಪಾವತಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಯಾರಿಗೂ ಹಣ ನೀಡುವ ಅಗತ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾದ್ಯಂತ ಜಾಗೃತಿ ಅಭಿಯಾನ

ಸೈಬರ್ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗದಗ ಜಿಲ್ಲಾ ಪೊಲೀಸರು ಶಾಲೆ, ಕಾಲೇಜು, ಬ್ಯಾಂಕ್, ಸಾರ್ವಜನಿಕ ಸಭೆ ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ, ಯುಪಿಐ ಪಿನ್, ಎಟಿಎಂ ಪಿನ್ ಮತ್ತು ಪಾಸ್‌ವರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಒಂದು ಕ್ಷಣದ ನಿರ್ಲಕ್ಷ್ಯ… ಲಕ್ಷಾಂತರ ರೂ. ನಷ್ಟ!

ಸೈಬರ್ ವಂಚಕರು ಹೊಸ ಹೊಸ ತಂತ್ರಗಳ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ. ಆದರೆ ಒಂದು ತ್ವರಿತ ದೂರು, ಒಂದು ಕರೆ ಮತ್ತು ಸ್ವಲ್ಪ ಜಾಗೃತಿ ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಬಹುದು. ಆದ್ದರಿಂದ “ವಂಚನೆ ಗೊತ್ತಾದ ಕ್ಷಣವೇ 1930” ಎಂಬುದನ್ನು ಮರೆಯಬೇಡಿ.

“ಸೈಬರ್ ವಂಚನೆಗೆ ಒಳಗಾದ ಕ್ಷಣವೇ 1930ಕ್ಕೆ ಕರೆ ಮಾಡಿ. ಸಮಯಕ್ಕೆ ದೂರು ನೀಡಿದರೆ ಕಳೆದುಕೊಂಡ ಹಣವನ್ನು ಫ್ರೀಜ್ ಮಾಡಿ ಮರಳಿ ಪಡೆಯುವ ಅವಕಾಶ ಹೆಚ್ಚಿರುತ್ತದೆ.”

ರೋಹನ್ ಜಗದೀಶ್ಜಿ

ಲ್ಲಾ ಪೊಲೀಸ್ ವರಿಷ್ಠಾಧಿಕಾರಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!