ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಾಲಕೆರೆ ಗ್ರಾಮದಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ವಿನೂತನ ಹೋರಾಟ ನಡೆಸಿದರು.
ಗ್ರಾಮದ ಬಸವೇಶ್ವರ ವೃತ್ತದಿಂದ ಶ್ರೀ ಅನ್ನದಾನೇಶ್ವರ ಮಠದವರೆಗೆ ನಡೆದ ದೀರ್ಘದಂಡ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ, ಜಿ.ಎಸ್. ಪಾಟೀಲರ ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ತೋರಿದ ಬದ್ಧತೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.
ಜಿ.ಎಸ್. ಪಾಟೀಲರು ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಆಡಳಿತ ಅನುಭವ ಹೊಂದಿದ್ದಾರೆ. ಅವರ ಕಾರ್ಯದಕ್ಷತೆ ಮತ್ತು ಜನಪರ ಚಿಂತನೆಗೆ ಸಚಿವ ಸ್ಥಾನ ಸೂಕ್ತ ಗೌರವವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶಗೌಡ ಮುಲ್ಕಿಪಾಟೀಲ ಮಾತನಾಡಿ, ಜಿ.ಎಸ್. ಪಾಟೀಲರು ಯಾವುದೇ ಹಗರಣಗಳಿಲ್ಲದ ಸ್ವಚ್ಛ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದು, ಈ ಭಾಗಕ್ಕೆ ಸಚಿವ ಸ್ಥಾನ ಸಿಗದಿರುವುದು ಜನರಲ್ಲಿ ಬೇಸರ ಮೂಡಿಸಿದೆ. ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ ಕಾರ್ಯಕರ್ತರು ಹಾಗೂ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ ಮಾತನಾಡಿ, ಸಚಿವ ಸ್ಥಾನಕ್ಕಾಗಿ ಅಗತ್ಯವಿದ್ದರೆ ರೋಣ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ತುಮಕೂರಿನಿಂದ ಬೆಂಗಳೂರಿನ ಕೆಪಿಸಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಹೋರಾಟ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.
ಆನಂದ ಹಳ್ಳಿ, ಬಸವರಾಜ ಪೂಜಾರ, ಅಪ್ಪಣ್ಣ ಹಳ್ಳಿ, ಪರಶುರಾಮ ತಲೇಖಾನ್, ಅಭಿಷೇಕ ಕುಸಮ್ಮನವರ, ಅಂದಪ್ಪ ಕುರಿ, ಬಸವರಾಜ ಹುಲ್ಯಾಳ, ಭೀಮಪ್ಪ ಖ್ಯಾರ, ಮುತ್ತಪ್ಪ ಪೂಜಾರ, ದುರುಗಪ್ಪ ತಲೇಖಾನ್, ಹುಲಗಪ್ಪ ಬಂಗಾಳಿಗಿಡದ, ಮುದಿಯಪ್ಪ ಪೂಜಾರ ಸೇರಿದಂತೆ ಅನೇಕರು ಭಾಗವಹಿಸಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಸೊಪ್ಪಯ್ಯ ಸೊಪ್ಪಿಹಿರೇಮಠ, ವೀರಣ್ಣ ಹಳ್ಳಿ, ಮಹೇಶ ಕುರಿ, ಹನಮಪ್ಪ ತೊಂಡಿಹಾಳ, ತಿಮ್ಮರೆಡ್ಡೆಪ್ಪ ಹೊಸಮನಿ, ಶರಣಪ್ಪ ಪೂಜಾರ, ಬಾಳಪ್ಪ ಬುರಡಿ, ಬಸಪ್ಪ ಮೂಲಿಮನಿ, ಮಹಾಂತೇಶ ಪ್ರಭಣ್ಣವರ, ಪ್ರವೀಣ ಬೈರಗೊಂಡ, ನವೀನ್ ಮಾದಿನೂರ, ಅಂದೇಶ ಶಿರೂರು, ವೀರಭದ್ರಪ್ಪ ನವಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಭಿಮಾನಿಗಳ ಹಕ್ಕೊತ್ತಾಯ
- ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು
- ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗಬೇಕು
- ಹಿರಿತನ ಮತ್ತು ಸಂಘಟನಾ ಸೇವೆಗೆ ಗೌರವ ಸಿಗಬೇಕು
- ಸಚಿವ ಸ್ಥಾನ ನೀಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು
“ಜಿ.ಎಸ್. ಪಾಟೀಲರು ಜಾತಿ, ಮತಗಳ ಗಡಿಯನ್ನು ಮೀರಿದ ಜನನಾಯಕರು. ಪಕ್ಷ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅಂತಹ ನಾಯಕನಿಗೆ ಸಚಿವ ಸ್ಥಾನ ನೀಡುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ.”
ಅಂದಾನಗೌಡ ಪಾಟೀಲ
ಅಧ್ಯಕ್ಷರು, ಹಾಲಕೆರೆ ಪಿಕೆಪಿಎಸ್



