ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸಿರುವ ಎಸ್.ಎಸ್. ಸೋಮಣ್ಣವರ ನೇತೃತ್ವದ ತಂಡ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಗದಗ ಜಿಲ್ಲಾ ಘಟಕದ 2026-31ನೇ ಸಾಲಿನ ಅವಧಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ.
ಜೂನ್ 2ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆದಿದ್ದು, ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್. ಚವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಾಗಡಿ ಪ್ರಭಾರಿ ಪ್ರಾಚಾರ್ಯ ಎಸ್.ಎಸ್. ಸೋಮಣ್ಣವರ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಎಂ.ಎಸ್. ಕೊಕ್ಕರಗುಂದಿ (ಸರ್ಕಾರಿ ಪದವಿ ಪೂರ್ವ ಕಾಲೇಜು, ಲಕ್ಷ್ಮೇಶ್ವರ), ಜಿಲ್ಲಾ ಉಪಾಧ್ಯಕ್ಷೆ (ಮಹಿಳಾ ಮೀಸಲು)ಯಾಗಿ ಅಮನ್ ಗುಳೇದಗುಡ್ಡ (ಮುನ್ಸಿಪಲ್ ಪದವಿ ಪೂರ್ವ ಕಾಲೇಜು, ಗದಗ), ಜಿಲ್ಲಾ ಖಜಾಂಚಿಯಾಗಿ ಎಂ.ಪಿ. ಕುಲಕರ್ಣಿ (ಸರ್ಕಾರಿ ಪದವಿ ಪೂರ್ವ ಕಾಲೇಜು, ನರಗುಂದ), ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಫ್.ಎಸ್. ಬೆಳವಗಿ (ಎಸ್.ಎಚ್.ಎಸ್. ಪದವಿ ಪೂರ್ವ ಕಾಲೇಜು, ಪೇಠಾಲೂರ), ಜಿಲ್ಲಾ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಹನುಮರೆಡ್ಡಿ (ಎನ್.ಎಫ್.ಎಂ. ಡಬಾಲಿ ಪದವಿ ಪೂರ್ವ ಕಾಲೇಜು, ಶಿರಹಟ್ಟಿ), ಜಿಲ್ಲಾ ಕಾರ್ಯದರ್ಶಿಯಾಗಿ ಎನ್.ಟಿ. ಮಳೋದೆ (ಸರ್ಕಾರಿ ಪದವಿ ಪೂರ್ವ ಕಾಲೇಜು, ನಿಡಗುಂದಿ), ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ಎಸ್.ಎಸ್. ನರಗುಂದ (ಪ್ರಾಚಾರ್ಯರು, ಎಸ್.ವಿ. ಪದವಿ ಪೂರ್ವ ಕಾಲೇಜು, ಬೆಳವಣಕಿ) ಹಾಗೂ ಜಿಲ್ಲಾ ಸಂಚಾಲಕರಾಗಿ ಎಸ್.ಎಸ್. ತೋಗುಣಸಿ (ಶ್ರೀ ಗುರು ಮಹಾಂತೇಶ ಪದವಿ ಪೂರ್ವ ಕಾಲೇಜು, ಸೂಡಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ತಂಡವು ಉಪನ್ಯಾಸಕರ ಹಿತಾಸಕ್ತಿ ರಕ್ಷಣೆ, ಶೈಕ್ಷಣಿಕ ಗುಣಮಟ್ಟ ವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ವಿವಿಧ ಶಿಕ್ಷಕರ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.
“ಉಪನ್ಯಾಸಕರ ಹಿತಾಸಕ್ತಿ ಮತ್ತು ಶಿಕ್ಷಣದ ಗುಣಮಟ್ಟ ವೃದ್ಧಿಗೆ ಸಂಘದ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುವುದು.”
ಎಸ್.ಎಸ್. ಸೋಮಣ್ಣವರ
ಜಿಲ್ಲಾ ಅಧ್ಯಕ್ಷರು



