ಬೆಂಗಳೂರು: ರಾಜ್ಯದ ಆನೆ ಶಿಬಿರಗಳು ಮತ್ತು ಸೆರೆಯಲ್ಲಿರುವ ಆನೆಗಳ ನಿರ್ವಹಣಾ ಕೇಂದ್ರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಮೊದಲ ಬಾರಿಗೆ “ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ ಜಾರಿಗೊಳಿಸಿದೆ.
ಹೊಸ ನಿಯಮಗಳ ಪ್ರಕಾರ, ಆನೆಗಳನ್ನು ವೀಕ್ಷಿಸುವ ಪ್ರವಾಸಿಗರು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಆನೆಗಳಿಗೆ ಸ್ನಾನ ಮಾಡಿಸುವುದು, ಮುಟ್ಟುವುದು ಅಥವಾ ಆಹಾರ ನೀಡುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು ಗುರುತಿಸಲಾದ ಗ್ರೀನ್ ಝೋನ್ ಪ್ರದೇಶದಲ್ಲೇ ನಿಂತು ಆನೆಗಳನ್ನು ವೀಕ್ಷಿಸಬೇಕು ಎಂದು ಸೂಚಿಸಲಾಗಿದೆ.
ಅದೇ ರೀತಿ ಆನೆಗಳ ಹಾಗೂ ಪ್ರವಾಸಿಗರ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು. ಯಾವುದೇ ಶಿಬಿರದಲ್ಲಿ ಒಂದೇ ಸಮಯದಲ್ಲಿ 10ಕ್ಕಿಂತ ಹೆಚ್ಚು ಆನೆಗಳನ್ನು ಸಾರ್ವಜನಿಕ ವೀಕ್ಷಣೆಗೆ ಪ್ರದರ್ಶಿಸಲು ಅವಕಾಶ ಇರದು ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಮೇ 19ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದ ನಂತರ ಈ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಶಿಬಿರಗಳಿಗೆ ನಿಯಮ ಪಾಲನೆಗಾಗಿ 15 ದಿನಗಳ ಗಡುವು ನೀಡಲಾಗಿದ್ದು, ಬಳಿಕ ಪರಿಶೀಲನೆ ನಡೆಸಿ ಪ್ರಮಾಣೀಕರಣ ನೀಡಲಾಗುತ್ತದೆ. ಅನುಮತಿ ಸಿಗುವವರೆಗೆ ಶಿಬಿರಗಳ ಕಾರ್ಯಾಚರಣೆಗೂ ಅವಕಾಶ ಇರುವುದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಹೊಸ ನಿಯಮಗಳಡಿ ಪ್ರವಾಸಿಗರ ಸಂಖ್ಯೆ ಮತ್ತು ಸಮಯಕ್ಕೂ ಮಿತಿ ವಿಧಿಸಲಾಗಿದೆ. ಒಂದೇ ಬ್ಯಾಚ್ನಲ್ಲಿ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದ್ದು, ವೀಕ್ಷಣಾ ಅವಧಿಯನ್ನು 20 ರಿಂದ 30 ನಿಮಿಷಗಳಿಗೆ ಸೀಮಿತಗೊಳಿಸಲಾಗುತ್ತದೆ.



