ರಾಮನಗರ: ವಿಧಾನಪರಿಷತ್ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ವಂಡರ್ಲಾ ರೆಸಾರ್ಟ್ನಿಂದ ನೇರವಾಗಿ ವಿಧಾನಸೌಧಕ್ಕೆ ಕರೆದೊಯ್ಯಲು ಐದು ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಅಡ್ಡಮತದಾನದ ಆತಂಕದ ನಡುವೆಯೇ ಕಾಂಗ್ರೆಸ್ ಶಾಸಕರ ಮೊದಲ ತಂಡ ಈಗಾಗಲೇ ವಿಧಾನಸೌಧ ತಲುಪಿದೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ನೇತೃತ್ವದಲ್ಲಿ ಶಾಸಕರು ರೆಸಾರ್ಟ್ನಿಂದ ಬೆಂಗಳೂರಿನ ವಿಧಾನಸೌಧಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮತದಾನ ಮುಗಿಯುವವರೆಗೆ ಶಾಸಕರ ಚಲನವಲನಗಳ ಮೇಲೆ ಪಕ್ಷದ ನಾಯಕತ್ವ ಕಟ್ಟುನಿಟ್ಟಿನ ನಿಗಾ ಇರಿಸಿದೆ.
ಏಳು ವಿಧಾನಪರಿಷತ್ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಅಡ್ಡಮತದಾನ ಸಾಧ್ಯತೆಯನ್ನು ಮನಗಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕಳೆದ ಕೆಲ ದಿನಗಳಿಂದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ವಿಧಾನಸಭೆಯ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಬಳಿಕ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಾಲ್ವರು ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವಾಗಿದೆ. ಆದರೆ ಐದನೇ ಅಭ್ಯರ್ಥಿಯ ಗೆಲುವು ಪಕ್ಷದ ಹೆಚ್ಚುವರಿ ಮತಗಳ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಸೇರಿದಂತೆ ಹಲವು ಶಾಸಕರ ಬೆಂಬಲ ಕಾಂಗ್ರೆಸ್ಗೆ ಲಭಿಸಿರುವುದಾಗಿ ಪಕ್ಷದ ವಲಯಗಳು ಹೇಳುತ್ತಿವೆ.
ಪ್ರತಿ ಅಭ್ಯರ್ಥಿಯ ಗೆಲುವಿಗೆ 28 ಮತಗಳ ಅಗತ್ಯವಿದ್ದು, ಮೊದಲ ನಾಲ್ವರು ಅಭ್ಯರ್ಥಿಗಳಿಗೆ ತಲಾ 29 ಮತಗಳನ್ನು ಹಂಚುವ ತಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ಉಳಿದ ಮತಗಳನ್ನು ಐದನೇ ಅಭ್ಯರ್ಥಿಗೆ ವರ್ಗಾಯಿಸುವ ಮೂಲಕ ಅಂತಿಮ ಸ್ಥಾನವನ್ನೂ ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಲೆಕ್ಕಾಚಾರ ನಡೆಸುತ್ತಿದೆ.



