ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವೀರಸಾವರ್ಕರ ರಸ್ತೆಯ ಮರಾಠಾ ಮಂಡಳದ ಸಮೀಪದ ಚಂದ್ರಮಹಲ್ ನಿವಾಸಿ ಶ್ರೀಮತಿ ಪಾರ್ವತಿಬಾಯಿ ಮೋಹನಲಾಲ ಚವ್ಹಾಣ (98) ಅವರು ಜುಲೈ 16ರಂದು ನಿಧನರಾದರು.
ಮೃತರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು. ಪಾರ್ವತಿಬಾಯಿ ಅವರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಕುಟುಂಬಸ್ಥರನ್ನು ಸಂಪರ್ಕಿಸಿ ನೇತ್ರದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಕುಟುಂಬಸ್ಥರು ಉದಾರ ಮನಸ್ಸಿನಿಂದ ನೇತ್ರದಾನಕ್ಕೆ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ನೇತ್ರಗಳನ್ನು ಸಂಗ್ರಹಿಸಿ ಯಶಸ್ವಿಯಾಗಿ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿತು.
98 ವರ್ಷಗಳ ಸಾರ್ಥಕ ಬದುಕು ನಡೆಸಿದ ಪಾರ್ವತಿಬಾಯಿ ಅವರು ಸಾವಿನಲ್ಲೂ ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾಗುವ ಮಾನವೀಯ ಕಾರ್ಯಕ್ಕೆ ಕುಟುಂಬಸ್ಥರು ಕೈಜೋಡಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ರಮೇಶ ಶಿಗ್ಲಿ, ರೇಣುಕಾಪ್ರಸಾದ ಹಿರೇಮಠ, ಅಶ್ವಥ್ ಸುಲಾಖೆ, ರಾಜಣ್ಣ ಮಲ್ಲಾಡದ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.



