ಬೆಂಗಳೂರು: ಮನೆ ಕಳ್ಳತನ ನಡೆಸಿ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಅವಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಸರಣಿ ಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 50 ಲಕ್ಷಕ್ಕೂ ಅಧಿಕ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಶ್ರೀನಿವಾಸ್ ಅಲಿಯಾಸ್ ಕರಾಟೆ ಶ್ರೀನಿವಾಸ್, ಶ್ರೀನಿವಾಸ್ ಜಿ ಹಾಗೂ ಪ್ರದೀಪ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಕರಾಟೆ ಶ್ರೀನಿವಾಸ್ ವಿರುದ್ಧ ಈಗಾಗಲೇ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುವುದು ಈತನ ಕೃತ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನದ ಬಳಿಕ ಚಿನ್ನಾಭರಣಗಳನ್ನು ಪ್ರದೀಪ್ ಹಾಗೂ ಆತನ ಸಹಚರರು ಖರೀದಿಸಿ ಮಾರಾಟ ಮಾಡುತ್ತಿದ್ದರು. ಚಿನ್ನ ಕಳ್ಳತನದ್ದೇ ಎಂಬ ಮಾಹಿತಿ ಇದ್ದರೂ ಆರೋಪಿಗಳು ಅದನ್ನು ಖರೀದಿಸುತ್ತಿದ್ದರೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರೆಲ್ಲರೂ ನಗರದ ಯಶವಂತಪುರ ಭಾಗದ ನಿವಾಸಿಗಳಾಗಿದ್ದು, ಹೊಸಕೋಟೆ, ಸದಾಶಿವನಗರ ಹಾಗೂ ಅವಲಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಇವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಆರೋಪಿಗಳನ್ನು ಬಂಧಿಸಿರುವ ಅವಲಹಳ್ಳಿ ಪೊಲೀಸರು, ಕಳ್ಳತನ ಪ್ರಕರಣಗಳ ಸಂಪರ್ಕ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



