ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಚರಂಡಿ ನೀರು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಸುಮಾರು 160 ಎಕರೆ ಫಲವತ್ತಾದ ಕೃಷಿ ಭೂಮಿ ಹಲವು ವರ್ಷಗಳಿಂದ ಪಾಳು ಬೀಳುತ್ತಿದ್ದು, ಸಮಸ್ಯೆ ಪರಿಹರಿಸದಿದ್ದರೆ ಒಂದು ವಾರದ ಬಳಿಕ ಪಾಳಾ–ಬದಾಮಿ ರಾಜ್ಯ ಹೆದ್ದಾರಿ ತಡೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪುರಸಭೆಗೆ ಮನವಿ ಸಲ್ಲಿಸಿದ ರೈತರು, ಕಳೆದ ಹಲವು ವರ್ಷಗಳಿಂದ ಪಟ್ಟಣದ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಹೊಲಗಳಿಗೆ ಸೇರುತ್ತಿದ್ದು, ಜಮೀನಿನಲ್ಲಿ ಆಳೆತ್ತರದ ಜವುಳು ಮತ್ತು ಕಸ ಬೆಳೆದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ರೈತ ಮುಖಂಡ ಮಂಜುನಾಥ ಮಾಗಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ಪ್ಯಾಟಿ ಹಾಗೂ ಮುತ್ತಣ್ಣ ಗಡೆಪ್ಪನವರ ಮಾತನಾಡಿ, ಕಳೆದ ತಿಂಗಳು ಮನವಿ ಸಲ್ಲಿಸಿದಾಗ ಒಂದು ವಾರದಲ್ಲಿ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ಆದರೆ 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಮತ್ತೊಮ್ಮೆ ಮನವಿ ಸಲ್ಲಿಸಲಾಗಿದ್ದು, ಒಂದು ವಾರದೊಳಗೆ ರೈತರು ಹಾಗೂ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಸಮಗ್ರ ರೈತರು ಸೇರಿ ಲಕ್ಷ್ಮೇಶ್ವರ ಮೂಲಕ ಹಾದು ಹೋಗುವ ಪಾಳಾ–ಬದಾಮಿ ರಾಜ್ಯ ಹೆದ್ದಾರಿಯನ್ನು ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸಿದ್ದಣ್ಣ ಹವಳದ, ಯಲ್ಲಪ್ಪ ಗಡೆಪ್ಪನವರ, ಸಿದ್ದು ಚಿಕ್ಕಣ್ಣವರ, ಲೋಹಿತ ಹಳೆಮನಿ, ಮಾಂತೇಶ ಲಿಂಗಶೆಟ್ಟಿ, ಮೌನೇಶ ಗಡೆಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಹಲವು ವರ್ಷಗಳಿಂದ ಫಲವತ್ತಾದ ಭೂಮಿ ಚರಂಡಿ ನೀರಿನಿಂದ ಹಾಳಾಗುತ್ತಿದೆ. ಇನ್ನೂ ನಿರ್ಲಕ್ಷ್ಯ ಮುಂದುವರಿದರೆ ರೈತರು ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯ.”
– ಮಂಜುನಾಥ ಮಾಗಡಿ, ರೈತ ಮುಖಂಡ



