ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳಿಗೆ ಭರ್ಜರಿ ಚಾಲನೆ ಸಿಕ್ಕಿದೆ. ನಾಗರಹೊಳೆಯ ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಗಜಪಯಣ ಆರಂಭವಾಗಿದ್ದು, ಮೊದಲ ಹಂತದಲ್ಲಿ 9 ದಸರಾ ಆನೆಗಳು ಮೈಸೂರಿನತ್ತ ಹೊರಟಿವೆ.
ವೀರನಹೊಸಹಳ್ಳಿಯಲ್ಲಿ ನಿಗದಿತ ಶುಭ ಮುಹೂರ್ತವಾದ ಬೆಳಗ್ಗೆ 10ರಿಂದ 10:28ರ ತುಲಾ ಲಗ್ನದಲ್ಲಿ ಗಜಪಡೆಗೆ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಿದರು.
ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ ಹಾಗೂ ಹೆಣ್ಣು ಆನೆಗಳಾದ ಲಕ್ಷ್ಮೀ ಮತ್ತು ಕಾವೇರಿ ಸೇರಿದಂತೆ 9 ಆನೆಗಳು ಮೊದಲ ತಂಡದಲ್ಲಿವೆ.
ಗಜಪಡೆ ಎರಡು ದಿನಗಳ ಕಾಲ ಮೈಸೂರು ನಗರದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲಿದೆ. ಬಳಿಕ ಆಗಸ್ಟ್ 28ರಂದು ಅರಮನೆ ಆವರಣ ಪ್ರವೇಶಿಸಿ ದಸರಾ ತಾಲೀಮು ಸೇರಿದಂತೆ ಮುಂದಿನ ಸಿದ್ಧತೆಗಳಲ್ಲಿ ಭಾಗಿಯಾಗಲಿದೆ.
25 ವರ್ಷಗಳ ದಸರಾ ಪಯಣಕ್ಕೆ ತೆರೆ
ಈ ಬಾರಿಯ ದಸರಾ ಗಜಪಯಣದಲ್ಲಿ ಅತ್ಯಂತ ಭಾವುಕ ಕ್ಷಣಕ್ಕೂ ಸಾಕ್ಷಿಯಾಯಿತು. ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಅಭಿಮನ್ಯು ಈ ಬಾರಿ ನಿವೃತ್ತಿಯಾಗಿದ್ದು, ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಲಾಯಿತು.
ಸುಮಾರು 25 ವರ್ಷಗಳಿಂದ ದಸರಾ ಮಹೋತ್ಸವದ ಭಾಗವಾಗಿದ್ದ ಅಭಿಮನ್ಯುವಿನ ಸೇವೆಯನ್ನು ಸ್ಮರಿಸಿ ಪೂಜೆ ಸಲ್ಲಿಸಲಾಯಿತು.
ಆದರೆ ದಸರಾ ಸಂದರ್ಭದಲ್ಲಿ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಕರೆತರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿಲ್ಲ. ಈ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಮುಂದಿನ ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.



