ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆಗೆ ಬ್ರೇಕ್ ಬಿದ್ದಿದ್ದು, ಈ ತಿಂಗಳ ಪಡಿತರ ವಿತರಣೆ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರದಿಂದ ಈವರೆಗೆ 10 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿತ್ತಾದರೂ, ಈ ತಿಂಗಳು ಕೇಂದ್ರ ಸರ್ಕಾರದ ಪಾಲಿನ 4 ಕೆ.ಜಿ. ಅಕ್ಕಿ ಹಾಗೂ 6 ಕೆ.ಜಿ. ರಾಗಿಯನ್ನಷ್ಟೇ ವಿತರಿಸಲಾಗುತ್ತಿದೆ.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡದಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ. ಮಲ್ಲೇಶ್ವರಂನ ನ್ಯಾಯಬೆಲೆ ಅಂಗಡಿಯಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಪಾಲಿನ 4 ಕೆ.ಜಿ. ಅಕ್ಕಿ ಮತ್ತು 6 ಕೆ.ಜಿ. ರಾಗಿ ಮಾತ್ರ ವಿತರಣೆಯಾಗುತ್ತಿದೆ. ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ 10 ಕೆ.ಜಿ. ಅಕ್ಕಿ ವಿತರಣೆ ಪುನರಾರಂಭವಾಗಲಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ತಿಳಿಸಿದ್ದಾರೆ.



