ಬೆಂಗಳೂರು: ಬಾಡಿಗೆ ಮನೆ ಸಿಕ್ಕ ತಕ್ಷಣ ಕ್ರೆಸೆಂಟ್ ರಸ್ತೆಯಲ್ಲಿರುವ ಹಳೆಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುತ್ತೇನೆ ಎಂದು ಮಾಜಿ ಸಚಿವ ಮಹದೇವಪ್ಪ ತಿಳಿಸಿದ್ದಾರೆ. ನಗರದ ಕ್ರೆಸೆಂಟ್ ರಸ್ತೆಯ ನಂ. 2ರ ಸರ್ಕಾರಿ ನಿವಾಸವನ್ನು ತೆರವುಗೊಳಿಸುವುದು ಹಾಗೂ ನವೀಕರಣ ಕಾಮಗಾರಿ ವಿಚಾರವಾಗಿ ಉಂಟಾಗಿರುವ ವಿವಾದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಬಂಗಲೆಯನ್ನು ಇದೀಗ ಸಚಿವ ಬೈರತಿ ಸುರೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಅವರು ಮನೆ ಖಾಲಿ ಮಾಡುವಂತೆ ಕೇಳಿದ್ದಾರೆ. ಅವರಿಗೆ ತೊಂದರೆಯಾಗುತ್ತಿರುವುದರಿಂದ ಬೇಗನೆ ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿರಬಹುದು. ಇದರಲ್ಲಿ ಅವರ ಯಾವುದೇ ತಪ್ಪಿಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ.
ಇದು ಹಿರಿಯ-ಕಿರಿಯ ಎಂಬ ಪ್ರಶ್ನೆಯಲ್ಲ. ಬೈರತಿ ಸುರೇಶ್ ಅವರು ಹಾಲಿ ಸಚಿವರಾಗಿದ್ದು, ಅವರ ದೈನಂದಿನ ಕಾರ್ಯಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಬಾರದು ಎಂಬುದು ತಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ತಾವು ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರ ಈ ನಿವಾಸವನ್ನು ನೀಡಿತ್ತು. ಇದೀಗ ಸಚಿವ ಸ್ಥಾನದಲ್ಲಿಲ್ಲದ ಕಾರಣ ನಿವಾಸವನ್ನು ಬೇಗನೆ ಬಿಟ್ಟುಕೊಡುವುದು ತಮ್ಮ ಕರ್ತವ್ಯ ಎಂದು ಮಹದೇವಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲದಿರುವುದರಿಂದ ಸದ್ಯ ಬಾಡಿಗೆ ಮನೆ ಹುಡುಕುತ್ತಿದ್ದು, ಸೂಕ್ತ ಮನೆ ಅಂತಿಮವಾದ ಕೂಡಲೇ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವನ್ನು ಹಿಂದೆ ಸದನದಲ್ಲೂ ಬೈರತಿ ಸುರೇಶ್ ಪ್ರಸ್ತಾಪಿಸಿದ್ದರು. ‘ನಾನು ಆ ಮನೆಗೆ ಬರಬೇಕಣ್ಣ’ ಎಂದು ಅವರು ಹೇಳಿದ್ದರು. ಆಗಲೂ ತಾವು ಮನೆ ಹುಡುಕುತ್ತಿದ್ದು, ಮನೆ ಸಿಕ್ಕ ತಕ್ಷಣ ಖಾಲಿ ಮಾಡುವುದಾಗಿ ತಿಳಿಸಿದ್ದೆ ಎಂದು ಮಹದೇವಪ್ಪ ಹೇಳಿದ್ದಾರೆ.
ಈ ವಿಚಾರದಲ್ಲಿ ತಾವು ಯಾರ ಮೇಲೂ ತಪ್ಪು ಹುಡುಕುವುದಿಲ್ಲ. ಬಂಗಲೆ ಹಂಚಿಕೆ ಹಾಗೂ ತೆರವು ವಿಚಾರವನ್ನು ಯಾವುದೇ ವಿವಾದವಾಗಿ ನೋಡುತ್ತಿಲ್ಲ ಎಂದು ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.



