ವಿಜಯಸಾಕ್ಷಿ ಸುದ್ದಿ, ವಿಜಯನಗರ: ದಾವಣಗೆರೆಯ ಟೀಮ್ ಅಕಾಡೆಮಿ ಹಾಸ್ಟೆಲ್ನಲ್ಲಿ ಮೃತಪಟ್ಟಿರುವ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ 17 ವರ್ಷದ ವಿದ್ಯಾರ್ಥಿನಿ ಬಿ. ರಂಜಿತಾ ಅವರ ಸಂಶಯಾಸ್ಪದ ಸಾವಿನ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಗಂಗಾಮತ ಬೆಸ್ತ ಸಮಾಜದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಾವಣಗೆರೆಯ ಟೀಮ್ ಅಕಾಡೆಮಿಗೆ ಸೇರಿ ಹಾಸ್ಟೆಲ್ನಲ್ಲಿ ವಾಸವಾಗಿದ್ದರು. ಸೆ.2ರಂದು ಸಂಜೆ ಸ್ನೇಹಿತೆಯೊಂದಿಗೆ ಹಾಸ್ಟೆಲ್ಗೆ ಆಗಮಿಸಿದ ಕೆಲವೇ ಸಮಯದ ಬಳಿಕ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ರಾತ್ರಿ ವಾರ್ಡನ್ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಘಟನೆಯ ಕುರಿತು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದು, ಸೆ.3ರಂದು ಮೃತಳ ತಂದೆ ಭೋವಿ ನಿಂಗಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 201/2026, ಬಿಎನ್ಎಸ್ ಕಲಂ 103(1) ಅಡಿ ದಾಖಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಾಸ್ಟೆಲ್ ವಾರ್ಡನ್, ಪ್ರಾಂಶುಪಾಲರು, ಅಧ್ಯಕ್ಷರು ಸೇರಿದಂತೆ ಸಂಬಂಧಪಟ್ಟವರ ಪಾತ್ರವನ್ನು ತನಿಖೆಗೆ ಒಳಪಡಿಸಬೇಕು. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆ ವಿವರ, ಸಂದೇಶಗಳು, ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿಗಳನ್ನು ಪರಿಶೀಲಿಸಿ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಿ ಸತ್ಯಾಂಶ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜದ ಅಧ್ಯಕ್ಷ ವೈ. ಯಮುನೇಶ್, ಮುಖಂಡರಾದ ಸರ್ದಾರ್ ಯಮನೂರಪ್ಪ, ನಿವೃತ್ತ ಪಿಎಸ್ಐ ಕಬ್ಬೇರ್ ರಾಮಪ್ಪ, ಮಡ್ಡಿ ವೆಂಕಪ್ಪ, ಶ್ರೀಧರ್, ಗಣೇಶ್ ಚಿಕ್ಕಕುರುವತ್ತಿ, ನಿಂಗರಾಜು ಬೆಂಡಿಗೇರಿ, ನಿಂಗಪ್ಪ ಕರಿಯಮ್ಮನವರ, ತಿರುಕಪ್ಪ ಸಿಗ್ಲಿ, ಶಿವು ಕಣಿವಿ, ಹಾಲೇಶ್ ಬೋವಿ, ನಾಗಪ್ಪ ಕಲ್ಲಮ್ಮನವರ, ರಾಜೇಶ್, ವೀರೇಶ್, ಸುರೇಶ್, ಶಶಿ, ಶಿವಕುಮಾರ್, ವೈ. ಜಂಬಯ್ಯ, ಆರ್. ಜಂಬಯ್ಯ, ಎನ್. ಅನಿಲ್, ಎಂ. ರಾಘವೇಂದ್ರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ರಂಜಿತಾ ಅವರ ಸಾವಿನ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಕುಟುಂಬದ ಅನುಮಾನಗಳಿಗೆ ಉತ್ತರ ದೊರೆಯುವಂತೆ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಬೇಕು.
— ಅಂಬಾಡಿ ನಾಗರಾಜ್, ಮಾಜಿ ಜಿಲ್ಲಾ ಅಧ್ಯಕ್ಷರು, ಗಂಗಾಮತ ಬೆಸ್ತ ಸಮಾಜ



