ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಟಗರಿನ ಕಾಳಗ ಸ್ಪರ್ಧೆ ಆರೋಗ್ಯಕರವಾಗಿರಬೇಕು. ಗ್ರಾಮೀಣ ಜನತೆಯ ಪ್ರೀತಿಯ ಆಟ ಇದಾಗಿದ್ದು, ಇದರಿಂದ ದ್ವೇಷ ಬೆಳೆಯಬಾರದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ತಿಳಿಸಿದರು.
ತಾಲೂಕಿನ ಅನಂತನಹಳ್ಳಿ ಹೊರವಲಯದಲ್ಲಿ ಶನಿವಾರ ಶ್ರಮಜೀವಿ ಗೆಳೆಯರ ಬಳಗ ಆಯೋಜಿಸಿದ್ದ ಟಗರಿನ ಕಾಳಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಸೊಗಡನ್ನು ಹೆಚ್ಚಿಸುವ ಈ ಸ್ಪರ್ಧೆ ಹಲವಾರು ಶತಮಾನಗಳಿಂದಲೂ ನಡೆದುಬಂದಿದೆ. ಇದನ್ನು ಈಗಲೂ ಮುಂದುವರಿಸುತ್ತಾ ಬಂದಿರುವುದು ಸಂತಸದ ವಿಚಾರ. ಇಂದಿನ ಯುವ ಪೀಳಿಗೆಯು ಗ್ರಾಮೀಣ ಆಟಗಳನ್ನು ಮರೆತು ಕೇವಲ ಕ್ರಿಕೆಟ್ನಂತಹ ಆಟಗಳ ಮೊರೆ ಹೋಗಿ ದೇಶೀ ಕ್ರೀಡೆಗಳನ್ನು ಮರೆಯುತ್ತಿರುವುದು ಬೇಸರದ ಸಂಗತಿ ಎಂದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವಿರಬೇಕು. ಆದರೆ ಪ್ರಾಣಿಗಳ ಹಿಂಸೆ ಮಾಡದೆ ಅವುಗಳನ್ನು ಮಕ್ಕಳಂತೆ ಪ್ರೀತಿಸುವ ಗುಣವನ್ನು ನಾವು ರೂಢಿಸಿಕೊಳ್ಳಬೇಕು ಎಂದರು.
ದಾವಣಗೆರೆ, ಹರಿಹರ, ಕೊಟ್ಟೂರು, ಚಿತ್ರದುರ್ಗ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಟಗರುಗಳು ಸ್ಪರ್ಧಿಸಿದವು.
ಮುಖಂಡರಾದ ಆರ್. ಲೋಕೇಶ್, ಪಟ್ನಾಮದ್ ನಾಗರಾಜ್, ದ್ಯಾಮಜ್ಜಿ ಆನಂದ್, ಎಲ್. ಪ್ರಕಾಶ್ ನಾಯ್ಕ್, ದಾವಣಗೆರೆ ಮಂಜುನಾಥ್, ಬಿಜಲಿ ಸಲೀಂ, ಶಶಿಕುಮಾರ್, ದಾದಾಪೀರ್, ಕೊಟ್ರೇಶ್, ಹಾಲೇಶ್, ಸಂತೋಷ್, ಅರುಣ, ಕುಬೇರ ಮುಂತಾದವರಿದ್ದರು.



