ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬುಧವಾರದಿಂದ ಮೂರು ದಿನಗಳ ಕಾಲ ನಡೆಯುವ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ನಾಡಿನಾದ್ಯಂತ ಭಕ್ತ ಸಮೂಹ ಹರಿದು ಬರುತ್ತಿದೆ. ಸೋಮೇಶ್ವರ ದೇವರಿಗೆ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಇದ್ದು, ನಾನಾ ಭಾಗಗಳಿಂದ ಜಾತ್ರೆ, ಯುಗಾದಿ, ನವರಾತ್ರಿ, ಕಾರ್ತಿಕ ಇತ್ಯಾದಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿ ಭಕ್ತಿ ಸಮರ್ಪಣೆ ಮಾಡಿಕೊಳ್ಳುತ್ತಾರೆ.
ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಿಂದ ಗ್ರಾ.ಪಂ ಸದಸ್ಯ ಪ್ರವೀಣ ಕಡೂರ ಅವರ ನೇತೃತ್ವದ 15-16 ಯುವಕರ ತಂಡವು ಹಲಗೇರಿಯಿಂದ ಪಾದಯಾತ್ರೆಯ ಮೂಲಕ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಆಗಮಿಸಿದರು. ಪ್ರತಿವರ್ಷ ಜಾತ್ರಾ ಸಮಯದಲ್ಲಿ ಸೋಮೇಶ್ವರನ ಸನ್ನಿಧಿಗೆ ಆಗಮಿಸುವ ಈ ತಂಡದ ಸದಸ್ಯರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿರುವದು ವಿಶೇಷವಾಗಿದೆ. ಜಾತ್ರೆಗೆ ಆಗಮಿಸುವ ಈ ಯುವಕರು ಸ್ವಲ್ಪ ವಿಶ್ರಾಂತಿ ಪಡೆದುಕೊಂಡು ನಂತರ ಜಾತ್ರೆಯ ದಿನವಾದ ಬುಧವಾರ ದೇವಸ್ಥಾನದಲ್ಲಿ ಅಲ್ಲಲ್ಲಿ ಇರುವ ಕಸವನ್ನು ಸ್ವಚ್ಛಗೊಳಿಸುವದು ಮತ್ತು ಅಂದು ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುವದು ಮತ್ತು ಸಾವಿರಾರು ಭಕ್ತರಿಗೆ ಅನ್ನಪ್ರಸಾದ ಸರಿಯಾಗಿ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ.
ಅರುಣ ಕಡೂರ, ಪ್ರಶಾಂತ ಕಡೂರ, ಶಂಭು, ಭರತ್, ಶರತ್, ವಿಶ್ವ, ಬಸವರಾಜ, ಟಿ.ಉಮೇಶ, ಸೋಮನಗೌಡ್ರ, ಶಿವು, ಸೋಮು, ಬಸವಲಿಂಗಪ್ಪ, ಕಿರಣ, ಬಸವರಾಜ ಎಂ., ನಾಗರಾಜ, ರಾಘವೇಂದ್ರ ಸೇರಿದಂತೆ ಯುವಕರು ಪಾದಯಾತ್ರೆಯ ಮೂಲಕ ಆಗಮಿಸಿದ್ದು, ಎರಡು ದಿನಗಳ ಕಾಲ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಸಂಜೆ ಪ್ರಸಾದ ಸೇವೆ ಮುಗಿದ ಮೇಲೆ ಅಡುಗೆ ಸಾಮಗ್ರಿಗಳ ಸ್ವಚ್ಛತೆ ಮತ್ತು ದೇವಸ್ಥಾನದ ಆವರಣದ ಸ್ವಚ್ಛತೆಯಲ್ಲಿ ಬೇಸರವಿಲ್ಲದೆ ತೊಡಗಿಸಿಕೊಳ್ಳುತ್ತಿರುವದು ವಿಶೇಷವಾಗಿದೆ.
ಪ್ರತಿವರ್ಷ ಜಾತ್ರೆಯ ವೇಳೆ ನಮ್ಮ ಮನೆ ದೇವರು ಸೋಮೇಶ್ವರನ ಸನ್ನಿಧಿಗೆ ಪಾದಯಾತ್ರೆಯ ಮೂಲಕ ಬರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಬರಿಗಾಲಿನಲ್ಲಿ ಹಲಗೇರಿಯಿಂದ ಎರಡು ದಿನ ಮುಂಚಿತವಾಗಿ ಹೊರಟು ಜಾತ್ರೆಯ ವೇಳೆಗೆ ಇಲ್ಲಿ ತಲುಪುತ್ತಿದ್ದೇವೆ. ದೇವರ ಸೇವೆ ಮಾಡುವದು ನಮಗೆ ದೊರಕಿದ ಪುಣ್ಯವಾಗಿದೆ.
– ಪ್ರವೀಣ ಕಡೂರ.
ಗ್ರಾ.ಪಂ ಸದಸ್ಯ, ಹಲಗೇರಿ.
“ಹಲಗೇರಿ ಗ್ರಾಮದ ಯುವಕರ ತಂಡ ಮಾಡುತ್ತಿರುವ ಈ ಸೇವೆ ನಿಜಕ್ಕೂ ಶ್ಲಾಘನೀಯ. ಇದು ಯುವಕರಿಗೆ ಒಂದು ಮಾದರಿ ಎನ್ನಬಹುದು. ಇದರಿಂದ ಮತ್ತಷ್ಟು ಯುವಕರು ಪ್ರೇರಣೆಯಾಗಿ ಇಂತಹ ಧಾರ್ಮಿಕ-ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವದಕ್ಕೆ ಮುಂದಾಗಬೇಕು”
– ರಾಘವೇಂದ್ರ ಪೂಜಾರ.
ಅರ್ಚಕರು, ಶ್ರೀ ಸೋಮೇಶ್ವರ ದೇವಸ್ಥಾನ.



