ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ದೇವದಾಸಿ ಮಹಿಳೆಯರ ಮರುಗಣತಿಯನ್ನು ಮನೆ ಮನೆಗೆ ತೆರಳಿ ನಡೆಸಲು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಕಳೆದ ಎರಡು-ಮೂರು ದಶಕಗಳಿಂದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಹಾಗೂ ದೇವದಾಸಿ ಮಹಿಳೆಯರ ನಿರಂತರ ಮನವಿ, ಒತ್ತಾಯದ ಮೇರೆಗೆ ರಾಜ್ಯ ಸರಕಾರ ತಡವಾಗಿಯಾದರೂ ಸಕಾರಾತ್ಮಕವಾಗಿ ಸ್ಪಂದಿಸಿ ದೇವದಾಸಿ ಮಹಿಳೆಯರ ಕುಟುಂಬದ ಮರುಗಣತಿಗೆ ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಸ್ವಾಗತಿಸುತ್ತದೆ.
ಆದರೆ, ಮರುಗಣತಿಯನ್ನು ದೇವದಾಸಿ ಮಹಿಳೆಯರ ಮನೆಮನೆಗೆ ತೆರಳಿ ಮಾಡುವಂತೆ ಅಗತ್ಯ ಕ್ರಮವಹಿಸಬೇಕು. ಈ ಹಿಂದೆ ಇಂತಹ ಗಣತಿಗಾಗಿ ತೊಡಗಿಸಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ನೌಕರರ ಮೂಲಕ ಗಣತಿಗೆ ಕ್ರಮ ವಹಿಸುವಂತೆ ಈ ಮೂಲಕ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸುತ್ತೇವೆ.
ಇಡೀ ದೇವದಾಸಿ ಮಹಿಳೆಯರ ಕುಟುಂಬದ ಎಲ್ಲಾ ಸದಸ್ಯರು ಈ ಗಣತಿಗೆ ದೊರೆಯಬೇಕಾದುದರಿಂದ ಅವರೆಲ್ಲರನ್ನು ಬೇರೊಂದು ಸ್ಥಳಗಳಿಗೆ ಕರೆಸಿ ಗಣತಿಗೆ ಮಾಡುವುದು ಆ ಕುಟುಂಬಗಳಿಗೆ ತೊಂದರೆದಾಯಕವಾಗಿದೆ. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಮೂಲಕವೇ ಮನೆ ಮನೆಗೆ ತೆರಳಿ ದೇವದಾಸಿ ಮಹಿಳೆಯರ ಮನೆಯೆದುರೇ ಗಣತಿ ಮಾಡುವುದು ಸೂಕ್ತವಾಗಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹುಲಗೆಮ್ಮ ಮಾತಿನ, ತಾಲೂಕು ಅಧ್ಯಕ್ಷರಾದ ದುರಗವ್ವ ಮಾದರ, ಮುಖಂಡರಾದ ಮಲ್ಲಿಕಾರ್ಜುನ ಮಾದರ, ಚಂದ್ರು ಹಾದಿಮನಿ, ಕಿಟ್ಟವ್ವ ಮಾದರ, ಕೇಶವ್ವ ಮಾದರ, ಕಳಕವ್ವ ಕೋತಬಾಳ, ಶಾಂತವ್ವ ಮಾದರ, ಕಸ್ತೂರವ್ವ ಮಾದರ, ಶಿವವ್ವ ಮಾದರ, ರೋಣವ್ವ ಮಾದರ, ಮರಿಯವ್ವ ಮೇಲಿನಮನಿ, ಶೇಕವ್ವ ಕರಡಿ, ಬಸವ್ವ ಚಿಕ್ಕಾಡಿ, ಹನಮವ್ವ ಹುನಗುಂದ, ಬೀಮವ್ವ ಹಾದಿಮನಿ, ದೇವಕ್ಕ ಬನ್ನಿಹಟ್ಟಿ ಮುಂತಾದವರು ಹಾಜರಿದ್ದರು.



