ಶಿವಮೊಗ್ಗ:- ವಿಚಾರಣಾಧೀನ ಓರ್ವ ಕೈದಿ ನೇಣಿಗೆ ಕೊರಳೊಡ್ಡಿರುವ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಜರುಗಿದೆ.
ಬಸವರಾಜ್ (38) ಆತ್ಮಹತ್ಯೆ ಮಾಡಿಕೊಂಡ ವಿಚಾರಣಾಧೀನ ಕೈದಿ. ಪತ್ನಿ ಮಂಜುಳಾ (32) ರನ್ನು ಶಿಕಾರಿಪುರದ ಸೊಸೈಟಿಕೇರಿಯಲ್ಲಿ ಕೊಲೆ ಮಾಡಿದ್ದ ಕೇಸ್ ನಲ್ಲಿ ಜೂನ್ 13ರಂದು ಬಸವರಾಜ್ ಜೈಲು ಸೇರಿದ್ದ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕುಡಿದ ಅಮಲಿನಲ್ಲಿ ಮಂಜುಳಾ ಕುತ್ತಿಗೆಗೆ ಚಿಮಟದಿಂದ ಚುಚ್ಚಿ ಬಸವರಾಜ್ ಕೊಲೆ ಮಾಡಿದ್ದನು. ಪತ್ನಿ ಕೊಂದು ಪರಾರಿಯಾಗಿದ್ದ ಬಸವರಾಜ್ನನ್ನು ಶಿಕಾರಿಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.
ಬಸವರಾಜ್ ಮತ್ತು ಮಂಜುಳಾ ದಂಪತಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದಾನೆ. ವಿಚಾರಣಾಧೀನ ಕೈದಿ ಬಸವರಾಜ್ ಶವ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆ ಎದುರು ಮಕ್ಕಳು ಮತ್ತು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.



