ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆಯಲ್ಲಿ ಮಕ್ಕಳ ಕಲಿಕೆ ಮತ್ತು ಶಾಲಾ ವಾತಾವರಣವನ್ನು ನಿರ್ಮಿಸುವಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚಿತ್ರಕಲಾ ಶಿಕ್ಷಕರು ಇಲಾಖೆಯ ಆಸ್ತಿ ಎಂದು ಶಾಲಾ ಶಿಕ್ಷಣ ಇಲಾಖೆ (ಆಡಳಿತ)ಯ ಉಪನಿರ್ದೇಶಕ ಆರ್.ಎಸ್. ಬುರಡಿ ಅಭಿಪ್ರಾಯಪಟ್ಟರು.
2025-26ನೇ ಸಾಲಿನ ಜಿಲ್ಲಾಮಟ್ಟದ ಸಹಪಠ್ಯ ಚಟುವಟಿಕೆಯ ಸ್ಪರ್ಧೆಯ ಬಹುಮಾನವನ್ನು ವಿತರಿಸಿ ಮಾತನಾಡಿದ ಅವರು, ಚಿತ್ರಕಲೆಯಿಂದ ಸೃಜನಶೀಲತೆ, ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬಹುದು. ಚಿತ್ರಕಲೆ ಐತಿಹಾಸಿಕ ಮಹತ್ವ ಮತ್ತು ದಾಖಲೆಯನ್ನು ಸಾರುತ್ತದೆ. ಕಲಾವಿದ ಮಾನವ ಕುಲದ ಶಾಸನಕಾರ ಎಂದರು.
ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, ಇಲಾಖೆಯ ಸಹಪಠ್ಯ ಚಟುವಟಿಕೆಯ ಕಾರ್ಯಕ್ರಮಗಳು ಶಿಕ್ಷಕರ ಆತ್ಮವಿಶ್ವಾಸ ಹೆಚ್ಚಿಸಿ ಅವರ ಆಂತರ್ಯದಲ್ಲಿನ ಕಲೆಯನ್ನು ಹೊರತರುವಲ್ಲಿ ಸಹಕಾರಿಯಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚು ಸುಧಾರಿಸಲು ಸಾಧ್ಯವಾಗಿಸುತ್ತದೆ ಎಂದರು.
ವೃತ್ತಿ ಶಿಕ್ಷಣ ವಿಷಯ ವೀಕ್ಷಕರಾದ ಗೀತಾ ಕುಲಕರ್ಣಿ ಮಾತನಾಡಿ, ಸಹಪಠ್ಯ ಚಟುವಟಿಕೆ, ಸ್ಪರ್ಧೆಯಿಂದ ಶಿಕ್ಷಕರಲ್ಲಿ ಹೊಸದೊಂದು ಅನುಭವ ಹಾಗೂ ವಿಶೇಷತೆಯನ್ನು ಅಳವಡಿಸಿಕೊಳ್ಳುವಲ್ಲಿ ಸಹಾಯಕವಾಗಿದೆ ಎಂದರು.
ಚಿತ್ರಕಲೆ ಸ್ಪರ್ಧೆಯಲ್ಲಿ ಕಾಳಪ್ಪ ಬಡಿಗೇರ ಪ್ರಥಮ, ಪ್ರವೀಣ ಮನೋಹರ್ ಗಾಯಕರ ದ್ವಿತೀಯ, ನಾಗರಾಜ ಚಿತ್ರಗಾರ ಮತ್ತು ಜೆ.ಕೆ. ಭಾಗವಾನರ್ ತೃತೀಯ ಸ್ಥಾನ, ಟಿ.ಆರ್. ಬೇವಿನಮರದ ಮತ್ತು ಮಲ್ಲಿಕಾರ್ಜುನ ಮುಂಡರಗಿ ಸಮಾಧಾನಕರ ಬಹುಮಾನ ಪಡೆದರು.
ಬಿ.ಎಲ್. ಚವ್ಹಾಣ, ಬಸವರಾಜ ನೆಲಜೇರಿ, ಬಸವರಾಜ ಕುತ್ನಿ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದರು. ಶರಣಯ್ಯ ವಸ್ತ್ರದ ನಿರೂಪಿಸಿ ವಂದಿಸಿದರು.



