ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಜನಗಣತಿ ದಿನೇದಿನೇ ಗೊಂದಲಮಯವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆರೋಪಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯ ಸರಕಾರ ದಿನಕ್ಕೊಂದು ಬದಲಾವಣೆ ಹೇಳುತ್ತಿದೆ.
ಆಯೋಗವು ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ, ಯಾರದೋ ಒತ್ತಡಕ್ಕೆ ಮಣಿದು ಗಣತಿ ಮಾಡುತ್ತಿದೆ. ಮೊನ್ನೆ ಡಿ.ಕೆ.ಶಿವಕುಮಾರ್ ಅವರು, 60 ಪ್ರಶ್ನೆಗಳಿಗೆ ಯಾರು ಉತ್ತರ ಕೊಡಲು ಸಾಧ್ಯ ಎಂದಿದ್ದಾರೆ. ಅಸಂಬದ್ಧವಾಗಿ ಅನೇಕ ಪ್ರಶ್ನೆಗಳನ್ನು ಸೇರಿಸಿದ್ದಾರೆ ಎಂದು ಟೀಕಿಸಿದರು.
ಶಿಕ್ಷಕರಿಗೂ ತೊಂದರೆ ಆಗುತ್ತಿದೆ. ಅವರಿಗೂ ಕುಟುಂಬ, ಎಲ್ಲವೂ ಇರುತ್ತದೆ. ವಿಕಲಚೇತನರನ್ನೂ ಬಳಸಿಕೊಂಡಿದ್ದು ಸಾಕಷ್ಟು ಟೀಕೆಗಳು ಬಂದಿವೆ. ಹಾಸನದ ಬೇಲೂರಿನಲ್ಲಿ ನಾಯಿ ಕಚ್ಚಿದ ಘಟನೆಯೂ ಆಗಿದೆ. ಇಂಥ ಹಲವಾರು ಘಟನೆಗಳಿಂದ ಹಲವರಿಗೆ ಗಾಯವಾಗಿದೆ. ಒಟ್ಟಾರೆಯಾಗಿ ಒತ್ತಡಕ್ಕೆ ಮಣಿದು ಆತುರಾತುರವಾಗಿ ಈ ರೀತಿ ಜಾತಿ ಜನಗಣತಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ನಾವೇನಾದರೂ ಹೆಚ್ಚು ಮಾತನಾಡಿದರೆ, ಬಿಜೆಪಿಯವರು ಹಿಂದುಳಿದವರ ವಿರೋಧಿಗಳು; ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಗಬಾರದೆಂದು ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಸಿದ್ದರಾಮಯ್ಯನವರೇ, ಈ ರಾಜ್ಯ, ದೇಶದ ಪರಿಶಿಷ್ಟ ಜಾತಿ, ಪಂಗಡದ ಎಲ್ಲ ಸಮುದಾಯಗಳಿಗೂ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ನ್ಯಾಯ ಕೊಡಬೇಕೆಂಬ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿಗೆ ಹೆಚ್ಚಾಗಿ ಇರುವಂಥದ್ದು.
ಆ ಬದ್ಧತೆಯ ಕಾರಣದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಬಂದ ನಂತರ ಯಾವುದೇ ಕೇಂದ್ರ ಸರಕಾರಗಳು ಮಾಡದ ತೀರ್ಮಾನ ಮಾಡಿದ್ದಾರೆ. ಅವರ ತೀರ್ಮಾನದಂತೆ ದೇಶಾದ್ಯಂತ ಜನಗಣತಿಯ ಜಾತಿ ಜನಗಣತಿ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಜಾತಿ ಜನಗಣತಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಹಿಂದೆ ಕಾಂತರಾಜು ವರದಿ ಸಂದರ್ಭದಲ್ಲೂ ಇದೇ ಥರದ ಗೊಂದಲಗಳು ನಿರ್ಮಾಣವಾಗಿತ್ತು. ಈಗಲೂ ಅದೇ ಸೃಷ್ಟಿಯಾಗಿದೆ ಎಂದು ನುಡಿದರು.



