ವಿಜಯಪುರ: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬನ್ನು ಬೆರೆಸಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಮಿಶ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ಇದು ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದು, ದನದ ಕೊಬ್ಬನ್ನು ಬೆರೆಸಿದ್ದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು. ಭಕ್ತರ ಭಾವನೆಗಳ ಜೊತೆ ಆಟ ಆವಡುವುದು ಸರಿಯಲ್ಲ. ಅದರಲ್ಲಿ ಪಾವಿತ್ರ್ಯತೆ ಇದೆ, ದನದ ಕೊಬ್ಬು ಬೆರೆಸುವುದು ಘೋರ ಅಪರಾಧ. ಆಗಾಗ ಪ್ರಸಾದದ ತಪಾಸಣೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಶಾಸಕ ಮುನಿರತ್ನ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆ ಆಗಲಿ. ನಿಜವಾಗಿ ಆ ರೀತಿ ಘೋರವಾದಂತಹ ಕೃತ್ಯ ಮಾಡಿದ್ದರೇ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ. ಫಸ್ಟ್ ಟೈಮ್ ಊಹಿಸದಂತಹ ಆಪಾದನೆ ಕೇಳಿ ನಾನು ಗಾಬರಿಯಾದೆ. ಹನಿಟ್ರ್ಯಾಪ್, ಸಿಡಿ ಮಾಡೋದು, ಹೆಣ್ಣುಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದು ಆಕ್ಷೇಪಿಸಿದ್ದಾರೆ.



