ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಗುರು ದತ್ತಾತ್ರೇಯ ಮಹಾರಾಜರ ಜಯಂತ್ಯುತ್ಸವದ ನಿಮಿತ್ತ ಡಿ. 15ರಂದು ಲೋಕಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷತ್ರಿಯ ಬ್ರಿಗೇಡ್ ಫೌಂಡೇಶನ್ ಅಧ್ಯಕ್ಷ ಆರ್.ಟಿ. ಕಬಾಡಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ 7 ವರ್ಷಗಳಿಂದ ಗುರು ದತ್ತಾತ್ರೇಯ ಮಹಾರಾಜರ ಜಯಂತಿ ಆಚರಿಸಲಾಗುತ್ತಿದ್ದು, ಡಿ. 15ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಗುರು ದತ್ತಾತ್ರೇಯ ಜನ್ಮೋತ್ಸವ, ತೊಟ್ಟಿಲೋತ್ಸವ, ನಾಮಕರಣ ಪೂಜಾ ಉತ್ಸವ, ಸಾಮೂಹಿಕ ಶ್ರೀ ಗುರುದತ್ತ ಬೀಜಮಂತ್ರ ಪಠಣ ಹಾಗೂ ಗುರುದತ್ತ ಮಹಾಯಾಗ ಮತ್ತು ಮಹಾಪ್ರಸಾದ ಸೇವೆ ಜರುಗಲಿದೆ ಎಂದು ವಿವರಿಸಿದರು.
ಹಿಮಾಚಲಪ್ರದೇಶ ಮಧುವನದ ಪೂಜ್ಯ ಪ್ರಕಾಶ ಸ್ವಾಮೀಜಿ ಅವಧೂತ ಸಾನ್ನಿಧ್ಯ ವಹಿಸುವರು. ರತ್ನಾಕರ ಭಟ್ ಜೋಶಿ ಚಾಲನೆ ನೀಡಲಿದ್ದಾರೆ. ಶ್ರೀ ಗುರುದತ್ತ ಉತ್ಸ ಸಮಿತಿ ಚೇರಮನ್ ಸಾಗರ ಪವಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿ.ಸಿ. ಬಾಕಳೆ, ಸಾವಯವ ಕೃಷಿಕ ಗುರುನಾಥಗೌಡ ಓದುಗೌಡ್ರ, ಸಂಗಮೇಶ ಕವಳಿಕಾಯಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂಬಾಸಾ ಕಬಾಡಿ, ಸಹಸ್ರಾರ್ಜುನ ಸೇವಾ ಟ್ರಸ್ಟ್, ನಾಗೋಸಾ ಬಾಂಡಗೆ, ನರಸಿಂಗಸಾ ಹಬೀಬ ಪರಿವಾರ, ಸುರೇಶ ಹಾವನೂರ ಗುರುನಾಥಗೌಡ ಓದುಗೌಡ್ರ, ಚನ್ಮಮ್ಮ ಪಳಕಣ್ಣವರ, ಜಯಶ್ರೀ ರಂಗ್ರೇಜಿ, ಚನ್ನಪ್ಪ ನಾರಾಯಣ ಪೂಜಾರ ಅವರಿಗೆ `ಕ್ಷಾತ್ರ ರತ್ನ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಪಾರಂಪರಿಕ ವೈದ್ಯ ಬಸವರಾಜ ಕೊಂಚಿಗೇರಿ ಅವರಿಗೆ ಮರಣೋತ್ತರ `ವೈದ್ಯ ರತ್ನ’ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮು ಹಬೀಬ, ಎನ್.ಎಸ್. ಪಾಟೀಲ, ಕಾಶಿನಾಥಸಾ ಶಿದ್ಲಿಂಗ್, ಸಾಗರ ಪವಾರ, ನಾರಾಯಣ ನಿರಂಜನ, ಶಂಕರಸಾ ಕಲಬುರ್ಗಿ, ದೀಪಕ ಪವಾರ ಉಪಸ್ಥಿತರಿದ್ದರು.



