ವಿಜಯಸಾಕ್ಷಿ ಸುದ್ದಿ, ಗದಗ: ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆ ಆಗಲಿದೆ. ಅದಕ್ಕೆ ಪೂರ್ವದಲ್ಲಿ ನವೆಂಬರ್ ಒಳಗಾಗಿ ಗ್ರಾ.ಪಂ, ವಾರ್ಡ್ ಯೋಜನೆಗಳ ಕರಡು ಪ್ರತಿಗಳಿಗೆ ಅನುಮೋದನೆ ಪಡೆಯಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದರು. ಆದರೆ, ಇದುವರೆಗೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದಕ್ಕೆ ಸರ್ಕಾರಿ, ರಾಜಕಾರಣ, ಆಡಳಿತ ವ್ಯವಸ್ಥೆಯೇ ಕಾರಣವೆಂದು ರಾಜ್ಯ ನೀತಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಹೇಳಿದರು.
ಬುಧವಾರ ಗದಗ ನಗರದ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿ.ವಿಯಲ್ಲಿ ಜರುಗಿದ ರಾಜ್ಯ ಸರ್ಕಾರದ ಮಹತ್ವದ ವಿಕೇಂದ್ರೀಕರಣ ಯೋಜನೆ ಅನುಷ್ಠಾನದ ಭಾಗವಾಗಿ ಕಿತ್ತೂರು ಕರ್ನಾಟಕದ ಎಲ್ಲ ಜಿಲ್ಲೆಗಳ 2026–27ನೇ ಸಾಲಿನ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ತಯಾರಿಕೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಕೇಂದ್ರೀಕರಣ ವ್ಯವಸ್ಥೆ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕೇಂದ್ರೀಕರಣ ವ್ಯವಸ್ಥೆಯಿಂದ ಸರ್ವಾಧಿಕಾರತ್ವ ಅಧಿಕಗೊಳ್ಳುತ್ತದೆ. ಕೇಂದ್ರೀಕರಣ ವ್ಯವಸ್ಥೆಯಿಂದ ಗ್ರಾಮೀಣ ಮತ್ತು ನಗರದ ನಡುವೆ ಕಂದಕ ಸೃಷ್ಟಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.]
ಜಿಲ್ಲಾ ಯೋಜನಾ ಸಮಿತಿಯು ಅ.10ರ ಒಳಗಾಗಿ ವಾರ್ಡ್ವಾರು, ತಾ.ಪಂ, ಜಿ.ಪಂನಲ್ಲಿ ಸಭೆ ನಡೆಸಿ ಯೋಜನೆಗಳ ಕುರುಡು ಪ್ರತಿಗಳನ್ನು ವಿಕೇಂದ್ರೀಕರಣ ಸಮಿತಿಗೆ ಸಲ್ಲಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದರು. ಕೇವಲ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಚಮತ್ಕಾರ ಮಾಡಲು ಸಾಧ್ಯವಿಲ್ಲ. 15 ದಿನಗಳ ಒಳಗಾಗಿ ವಾರ್ಡ್ವಾರು, ತಾ.ಪಂ, ಜಿ.ಪಂಗಳಿಂದ ಅಭಿವೃದ್ಧಿ ಯೋಜನೆಗಳ ಕುರಿತು ಕರಡು ಪ್ರತಿ ಪಡೆದು ಸಭೆ ನಡೆಸಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಹೇಳಿದರು.
ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚಾಯತ್ ರಾಜ್ ಇಲಾಖೆ ಕಾನೂನಿನ ಪ್ರಕಾರ ವಿಕೇಂದ್ರೀಕರಣ ಅನುಷ್ಠಾನ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದರು.
ಮೊದಲು ಮೇಲಿನ ಹಂತದಿಂದ (ಜಿಲ್ಲಾಡಳಿತ) ಕರಡು ಯೋಜನೆ ಸಿದ್ಧಗೊಂಡು ಕೆಳಗಿನ ಹಂತದಲ್ಲಿ (ಗ್ರಾ.ಪಂ, ವಾರ್ಡ್) ಯೋಜನೆ ಜಾರಿ ಆಗುತ್ತಿತ್ತು. ಆದರೆ ಈಗ, ಕೆಳಗಿನ ಹಂತದಿಂದ ಕರಡು ಯೋಜನೆ ಸಿದ್ಧಗೊಂಡು ಮೇಲಿನ ಹಂತಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿತ್ತಿದೆ. ಮುಂದಿನ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗಾಗಿ ನಿಗದಿತ ಅವಧಿಯೊಳಗಾಗಿ ಯೋಜನೆಗಳಿಗೆ ಅನುಮೋದನೆ ಸಿಗಬೇಕಿದೆ ಎಂದರು.
ಹಿರಿಯ ನಿರ್ದೇಶಕ ಹಾಗೂ ಪದನಿಮಿತ್ತ ಸರ್ಕಾರದ ಕಾರ್ಯದರ್ಶಿ ಬಸವರಾಜ ಎಸ್ ಯೋಜನೆ ರೂಪಿಸುವಲ್ಲಿ ವಹಿಸಬೇಕಾದ ಅಂಶಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ, ತಾ.ಪಂ, ವಾರ್ಡ್ ಕುರಿತು ಸಭೆ ನಡೆಸದ ಕುರಿತು ಚರ್ಚೆ ಜರುಗಿತು.
ಈ ವೇಳೆ ಜಿ.ಪಂ ಬೆಳಗಾವಿಯ ಸಿಇಓ ರಾಹುಲ್ ಶಿಂದೆ, ವಿ.ವಿ ಕುಲಪತಿ ಸುರೇಶ ನಾಡಗೌಡರ, ಬಾಗಲಕೋಟೆ ಸಿಇಓ ಶಶೀಧರ ಕುರೇರ, ಹಾವೇರಿ ಸಿಇಓ ರುಚಿ ಬಿಂದಾಲ, ಧಾರವಾಡ ಸಿಇಓ ಭುವನೇಶ ಪಾಟೀಲ, ವಿಜಯಪುರ ಸಿಇಓ ರಿಷಿ ಆನಂದ, ಉತ್ತರ ಕನ್ನಡ ಸಿಇಓ ದಿಲೀಪ್ ಶಶೀ, ಯೋಜನಾ ಇಲಾಖೆ ಜಂಟಿ ಕಾರ್ಯದರ್ಶಿ ಬಿ. ಜಾನಕಿರಾಂ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಇತರರು ಇದ್ದರು.
ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಮೊದಲು ಮಂತ್ರಿಗಳು ಹೇಳಿದಂತೆ ಸರ್ಕಾರ ನಡೆಯುತ್ತಿತ್ತು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಶಾಸಕರು ಹೇಳಿದಂತೆ ನಡೆಯುತ್ತಿತ್ತು. ಈಗ ಜನರಿಂದ ಸರ್ಕಾರ ನಡೆಯುವಂತೆ ಯೋಜನೆಗಳು ಸಿದ್ಧಗೊಳ್ಳಬೇಕು. ಜಿ.ಪಂ ಸಿಇಓಗಳು ಬ್ರಿಟಿಷ್ ಅಧಿಕಾರಿಗಳಲ್ಲ. ಐಎಎಸ್ ಅಧಿಕಾರಿಗಳು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು. ಕೇವಲ ಮಾರ್ಗಸೂಚಿಗಳು ಹೇಳಿದಂತೆ ಕೆಲಸ ಮಾಡುವುದಲ್ಲ. ಇರುವ ಕಾನೂನುಗಳ ಪಾಲನೆಯೊಂದಿಗೆ ಕಾರ್ಯಗಳಾಗಬೇಕು ಎಂದು ಹೇಳಿದರು.



