ಮರಣ ಯಾವ ಕ್ಷಣದಲ್ಲಿ ಬಂದು ತಟ್ಟುತ್ತದೆ ಎಂಬುದು ಯಾರಿಗೂ ತಿಳಿಯದು. ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ‘ಪಾತ್ರಧಾರಿ’ ಸಿನಿಮಾದ ಚಿತ್ರೀಕರಣದ ವೇಳೆಯೇ ನಿರ್ದೇಶಕ ಸಂಗೀತ್ ಸಾಗರ್ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರ ಅಕಾಲಿಕ ನಿಧನದಿಂದ ಕುಟುಂಬ ಹಾಗೂ ಸಿನಿಮಾ ತಂಡ ತೀವ್ರ ಶೋಕದಲ್ಲಿದೆ.
ಕೊಪ್ಪ ಸಮೀಪ ‘ಪಾತ್ರಧಾರಿ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ತಂಡ ಅಲ್ಲಿ ತಂಗಿತ್ತು. ಈ ನಡುವೆಯೇ ಸಾಗರ್ ಅವರಿಗೆ ಅಸ್ವಸ್ಥತೆ ಉಂಟಾಗಿ ಸೆಟ್ನಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅವರ ಮೃತದೇಹವನ್ನು ಇರಿಸಲಾಗಿದೆ.
ಸಂಗೀತ್ ಸಾಗರ್ ಅವರು ಮೆಚ್ಚುಗೆ ಪಡೆದ ‘ಸ್ನೇಹಿತ’ ಚಿತ್ರವನ್ನು 2021ರಲ್ಲಿ ನಿರ್ದೇಶಿಸಿದ್ದರು. ‘ಓ ಪ್ರೀತಿಯಾ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಸಹ ಮಾಡಿದ್ದರು. ತಮ್ಮದೇ ಲೋಕದಲ್ಲಿ ಶಾಂತವಾಗಿ ಕೆಲಸ ಮಾಡುತ್ತಿದ್ದ ಸಾಗರ್ ಅವರ ಅಂತ್ಯ ಇಂಥ ದಾರುಣವಾಗಿ ಸಂಭವಿಸಿರುವುದು ಎಲ್ಲರನ್ನೂ ಬೇಸರಗೊಳಿಸಿದೆ.
ಸಾಗರ್ ಸಾವಿನ ಸುದ್ದಿ ತಿಳಿದ ನಂತರ ಅವರ ಪತ್ನಿ ಸುಶ್ಮಿತಾ ಹಾಗೂ ಮಗಳು ವಂಧ್ಯಾ ಆಸ್ಪತ್ರೆ ತಲುಪಿದ್ದು, ದುಃಖದಲ್ಲಿ ಮುಳುಗಿದ್ದಾರೆ. ಇನ್ನು ಆಸ್ಪತ್ರೆಗೆ ಬಿಲ್ ಪಾವತಿ ನಡೆದಿಲ್ಲ ಎನ್ನಲಾಗಿದ್ದು, ಚಿತ್ರ ತಂಡ ಬಿಲ್ ಪಾವತಿಸುವ ನಿರೀಕ್ಷೆಯಲ್ಲಿದ್ದಾರೆ. ನಿರ್ಮಾಪಕರು ಹಾಗೂ ತಂಡದವರು ಶೀಘ್ರದಲ್ಲೇ ಆಸ್ಪತ್ರೆಗೆ ಆಗಮಿಸುವ ಸಾಧ್ಯತೆ ಇದೆ. ಬಿಲ್ ಪಾವತಿ ನಂತರ ಮೃತದೇಹ ಮನೆಗೆ ಕೊಂಡೊಯ್ಯುವ ಸಾಧ್ಯತೆ ಇದೆ.



