ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಾಡಲಾದ ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆಯಲ್ಲಿ ಕೆಲ ವ್ಯತ್ಯಾಸ ಕಂಡು ಬಂದಿರುವದರಿಂದದ ಶಿರಹಟ್ಟಿ ತಾಲೂಕಿನ 27 ಹಾಗೂ ಲಕ್ಷ್ಮೇಶ್ವರ ತಾಲೂಕಿನ 40 ರೈತ ಫಲಾನುಭವಿಗಳು ಸಮೀಕ್ಷೆಗೆ ಹೊಂದಾಣಿಕೆಯಾಗುತ್ತಿಲ್ಲ. ಇವರೆಲ್ಲರಿಗೂ ಕೃಷಿ ಇಲಾಖೆ ಆಕ್ಷೇಪಣೆ ಸಲ್ಲಿಸಲು ಮಾ.3ರವರೆಗೆ ಕಾಲವಕಾಶ ನೀಡಿದೆ.
ಗ್ರಾಮ ಮಟ್ಟದಲ್ಲಿ ಪಿಆರ್ಓ, ಗ್ರಾಮ ಆಡಳಿತಾಧಿಕಾರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಾಯಕರೆಲ್ಲರೂ ಸೇರಿ ಬೆಳೆ ಸಮೀಕ್ಷೆಯನ್ನು ನಡೆಸಿದ್ದು, ಇವರು ನಡೆಸಿದ ಸಮೀಕ್ಷೆಗೂ ರೈತರು ಬೆಳೆ ವಿಮಾ ತುಂಬಿದ್ದಕ್ಕೂ ವ್ಯತ್ಯಾಸವಾಗಿರುವದರಿಂದ ಎರಡೂ ತಾಲೂಕುಗಳಲ್ಲಿ 67 ರೈತ ಫಲಾನುಭವಿಗಳಿಗೆ ತಾವು 2023-24ರ ಮುಂಗಾರು ಹಂಗಾಮಿನಲ್ಲಿ ನಮೂದಾದ ಬೆಳೆಯ ಉತಾರ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಮಾರಾಟ ಮಾಡಿದ್ದಕ್ಕೆ ಅದರ ರಸೀದಿ, ಅಥವಾ ಎಪಿಎಂಸಿಯಲ್ಲಿ ಬೆಳೆ ಮಾರಾಟ ಮಾಡಿದ್ದರ ರಸೀದಿಗಳೊಂದಿಗೆ ಮಾ.3ರ ಒಳಗೆ ರೈತ ಸಂಪರ್ಕ ಕೇಂದ್ರ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಗ್ರಾಮ ಮಟ್ಟದಿಂದ ತಾಲೂಕು ಮಟ್ಟದವರೆಗೂ ಬೆಳೆ ಸಮೀಕ್ಷೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಿದ್ದಾಗ್ಯೂ ಸಹ ಸಮೀಕ್ಷೆಗೂ ಬೆಳೆ ವಿಮೆಯಲ್ಲಿ ನಮೂದಾದ ಬೆಳೆಗಳಿಗೂ ಹೊಂದಾಣಿಕೆ ಆಗದೇ ಇರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ.
ಬೆಳೆ ಸಮೀಕ್ಷೆಗೂ ವಿಮೆ ತುಂಬಿದ ಬೆಳೆಗಳಿಗೂ ವ್ಯತ್ಯಾಸ ಬರುತ್ತಿರುವದರಿಂದ ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇರಬಹುದೆಂಬ ಶಂಕೆಯನ್ನು ಕೆಲ ಪ್ರಜ್ಞಾವಂತ ರೈತರು ವ್ಯಕ್ತಪಡಿಸುತ್ತಿದ್ದು, ರೈತರಿಂದ ಪಹಣಿಗಳನ್ನು ಪಡೆದು ತಾವೇ ವಿಮೆ ಕಂತನ್ನು ತುಂಬಿ ಇನ್ಸುರೆನ್ಸ್ ಕ್ಲೇಮ್ ಆದ ನಂತರ ರೈತರಿಂದ ಅದಕ್ಕೆ ಪ್ರತಿಯಾಗಿ ಹಣವನ್ನು ಪಡೆಯುತ್ತಿದ್ದಾರೆಂಬ ಆರೋಪಗಳು ಸಹ ಕೇಳಿಬಂದಿವೆ. ಕಾರಣಗಳು ಏನೇ ಇದ್ದರೂ, ಅರ್ಹ ರೈತ ಫಲಾನುಭವಿಗಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗಬಾರದೆನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ, 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಾಡಲಾದ ಬೆಳೆ ವಿಮೆ ಮತ್ತು ಬೆಳೆ ಸಮೀಕ್ಷೆಯಲ್ಲಿ ಶಿರಹಟ್ಟಿ ತಾಲೂಕಿನ 27, ಲಕ್ಷ್ಮೇಶ್ವರ ತಾಲೂಕಿನ 40 ರೈತ ಫಲಾನುಭವಿಗಳ ದಾಖಲೆಗಳಲ್ಲಿ ವ್ಯತ್ಯಾಸ ಬಂದಿದೆ. ಈ ರೈತರು ತಮ್ಮ ಆಕ್ಷೇಪಣೆ ಇದ್ದರೆ ನಮೂದಾದ ಬೆಳೆಯ ಉತಾರ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಮಾರಾಟ ಮಾಡಿದ್ದಕ್ಕೆ ಅದರ ರಸೀದಿ ಅಥವಾ ಎಪಿಎಂಸಿಯಲ್ಲಿ ಮಾರಾಟ ಮಾಡಿದ್ದರ ರಸೀದಿಗಳೊಂದಿಗೆ ಮಾ.3 ಒಳಗೆ ರೈತ ಸಂಪರ್ಕ ಕೇಂದ್ರ ಶಿರಹಟ್ಟಿ-ಲಕ್ಷ್ಮೇಶ್ವರದಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.
ಪ್ರೈವೆಟ್ ಪರ್ಸನ್ ಸಮರ್ಪಕವಾಗಿ ಜಿಪಿಎಸ್ ಮಾಡಬೇಕು. ರೈತರಿಗೆ ಹೆಚ್ಚಿನ ತಿಳುವಳಿಕೆ ನೀಡಬೇಕು. ಸರಕಾರ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸರಕಾರದ ಸೌಲಭ್ಯ ಎಲ್ಲ ರೈತರಿಗೂ ಸಹ ದೊರೆಯುವಂತೆ ವ್ಯವಸ್ಥೆಯನ್ನು ಮಾಡಬೇಕು.
– ರಮೇಶ ಕೋಳಿವಾಡ.
ಜಿಲ್ಲಾ ಪ್ರ.ಕಾರ್ಯದರ್ಶಿ, ಭಾರತೀಯ ಕಿಸಾನ ಸಂಘ.
ಸರಕಾರ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದಕ್ಕೆ ಬೆಳೆ ವಿಮೆಯನ್ನು ಜಾರಿಗೊಳಿಸಿದೆ. ಕೆಲ ಮಧ್ಯವರ್ತಿಗಳ ಹಾವಳಿಯಿಂದ ಅರ್ಹ ರೈತರು ಸೌಲಭ್ಯದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಕೊಂಡು ರೈತರಿಗೆ ಸರಕಾರದ ಸೌಲಭ್ಯ ಸಮರ್ಪಕವಾಗಿ ಸಿಗುವಂತೆ ಮಾಡಬೇಕು.
– ಮಹಾಂತೇಶ ದಶಮನಿ.
ಡಿ.ಕೆ.ಶಿ ಅಭಿಮಾನಿ ಬಳಗದ ಜಿಲ್ಲಾ ಕಾರ್ಯಾಧ್ಯಕ್ಷ.



