ದೊಡ್ಡಬಳ್ಳಾಪುರ : ಚುನಾವಣೆ ಸಂದರ್ಭದಲ್ಲಿ ಜನರಿಗೆ ಶಾಸಕರು ಸೀರೆ ಹಂಚಿ, ತೀರ್ಥ ಕ್ಷೇತಗಳಿಗೆ ಪ್ರವಾಸ ಭಾಗ್ಯ ಕೊಟ್ಟು, ಷಷ್ಠಿ ಪೂರ್ತಿ ಕಾರ್ಯಕ್ರಮ ಮಾಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಮೇಲೆ ತಾಲೂಕಿನ ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್, ಹಾಲಿ ಹಾಗು ಮಾಜಿ ಶಾಸಕರ ವಿರುದ್ಧ ಗುಡುಗಿದರು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರೀಶ್ ಗೌಡ, ಕ್ಷೇತ್ರದಲ್ಲಿ ಅಭಿವೃದ್ಧಿ ಅನ್ನುವುದು ಕಣ್ಮರೆಯಾಗಿದೆ. ರಾಜಕೀಯ ಕಾರಣಕ್ಕಾಗಿ ಮಾಜಿ ಶಾಸಕರು ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ಸ್ವಾರ್ಥ ರಾಜಕೀಯ ಕಾರಣದಿಂದ ದೊಡ್ಡಬಳ್ಳಾಪುರ ಕ್ಷೇತ್ರ ಹಿಂದುಳಿದಿದೆ, ದೊಡ್ಡಬಳ್ಳಾಪುರ ನಗರಸಭೆಯಾಗಿ 15 ವರ್ಷಗಳೇ ಆದ್ರೂ ನಗರದಲ್ಲಿನ ಸಮಸ್ಯೆಗಳು ಇನ್ನೂ ಜೀವಂತವಾಗಿವೆ, ನಗರದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿದೆ.
ಮಾಜಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುವುದು ಇಲ್ಲ, ಹಾಲಿ ಶಾಸಕರನ್ನ ಮಾಡುವುದಕ್ಕೂ ಬಿಡುವುದಿಲ್ಲ, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಆಗಿನ ಶಾಸಕರು ಕೆಲಸ ಮಾಡದಂತೆ ಮಾಡಿದ್ರು, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮಾಜಿ ಶಾಸಕರು ಹಾಲಿ ಶಾಸಕರು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು.



