ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಸಭೆ ಮಂಗಳವಾರ ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಮಾತನಾಡಿದ ಶಾಸಕರು, ಇಲಾಖೆವಾರು ಸರಿಯಾದ ಪ್ರಸ್ತಾವನೆ ಸಲ್ಲಿಸಿದರೆ ಸರಕಾರದಿಂದ ಅನುದಾನ ತರುವ ಪ್ರಯತ್ನ ಮಾಡೋಣ. ಆದರೆ ಅಧಿಕಾರಿಗಳು ಮಾಹಿತಿ ಕೊರತೆಯಿಂದ ಸರಿಯಾಗಿ ಕ್ರಿಯಾಯೋಜನೆ ಮಾಡಿಕೊಂಡು ಬಂದಿಲ್ಲ. ಇನ್ನು ಕೆಲವು ಅಧಿಕಾರಿಗಳಿಗೆ ಈ ಯೋಜನೆಯ ಬಗ್ಗೆ ಗೊತ್ತಿಲ್ಲ ಎನ್ನುವದು ಸಹ ವಿಷಾದದ ಸಂಗತಿಯಾಗಿದೆ. ಅಧಿಕಾರಿಗಳು ಕ್ರೀಯಾಶೀಲರಾಗದಿದ್ದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಗಳಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ. ಬ್ಯಾಂಕುಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಶಿಕ್ಷಣ ಸಾಲ ತೆಗೆದುಕೊಳ್ಳುವವರಿಗೆ ಸಾಲ ಮಂಜೂರಾತಿಯನ್ನು ಸರಳಗೊಳಿಸಿ, ಸಾಲಕ್ಕಾಗಿ ಬ್ಯಾಂಕುಗಳಿಗೆ ಪಾಲಕರನ್ನು ಅಲೆದಾಡಿಸಬೇಡಿ. ಸರಕಾರದಿಂದ ರೈತರಿಗೆ ಬರುವ ಸಹಾಯಧನ, ಪರಿಹಾರ ನಿಧಿ, ವಿಮೆ ಹಣಗಳನ್ನು ಸಾಲಕ್ಕೆ ಸರಿಹೊಂದಿಸಬೇಡಿ ಎಂದು ಸೂಚಿಸಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಸದ್ಯ ಪಂಚಾಯತ್ ರಾಜ್ ಆಕ್ಟ್ ಯೋಜನಾ ಸಮಿತಿ ರಚನೆಯಾಗಿದ್ದು, ಕೆಳಹಂತದ ಸಮಸ್ಯೆಗಳನ್ನು ಪಟ್ಟಿಮಾಡಿ ಕ್ರೋಢೀಕರಣ ಮಾಡಿ ಅನುಮೋದನೆ ಪಡೆಯಲು ವಾರ್ಷಿಕ ಯೋಜನೆ ಸಿದ್ಧಪಡಿಸಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ತಾಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, ಶಿರಹಟ್ಟಿ ತಹಸೀಲ್ದಾರ ಕೆ. ರಾಘವೇಂದ್ರರಾವ, ಲಕ್ಷ್ಮೇಶ್ವರ ತಾಪಂ ಇಓ ಕೃಷ್ಣಪ್ಪ ಧರ್ಮರ, ಶಿರಹಟ್ಟಿ ತಾಪಂ ಇಓ ಆರ್.ವಿ. ದೊಡ್ಡಮನಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಉಭಯ ತಾಲೂಕುಗಳ ಯೋಜನಾ ಅಧಿಕಾರಿ ಶಿವಕುಮಾರ್ ವಾಲಿ, ಎಚ್.ಎ. ಕೊಂಡಿಕೊಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಷ್ ದಾಯಗೊಂಡ, ಟಿಐಇಸಿ, ತಾಲೂಕು ನರೇಗಾ ಸಿಬ್ಬಂದಿ, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.



