ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಅಸುಂಡಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ ಅಧ್ಯಕ್ಷ ಅಲ್ತಾಫ ಕಾಗದಗಾರ ನೇತೃತ್ವದಲ್ಲಿ ಕೋವಿಡ್ ಜಾಗೃತಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಅಲ್ತಾಫ ಕಾಗದಗಾರ ಮಾತನಾಡಿ, ಗರ್ಭಿಣಿಯರು, ವೃದ್ಧರು, ಹೃದಯ ಸಂಬಂಧಿ ಕಾಯಿಲೆ ಇರುವವರು, ಶ್ವಾಸಕೋಶ ಸಮಸ್ಯೆ ಇದ್ದವರು ಮಾಸ್ಕ್ ಧರಿಸುವುದು ಒಳ್ಳೆಯದು. ಪಾಲಕರಲ್ಲಿ ಅನಾರೋಗ್ಯ ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ತಿಳಿಸಿ ಶಿಕ್ಷಕರಿಗೆ ಮಕ್ಕಳ ಆರೋಗ್ಯದ ಕಾಳಜಿ ಬಗ್ಗೆ ತಿಳಿಸಿದರು.
ಸದಸ್ಯರಾದ ಸೋಮರಡ್ಡಿ ರಾಮೇನಹಳ್ಳಿ ಇವರ ಸೂಚನೆ ಮೇರೆಗೆ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಸಜ್ಜನರ ಮಾತನಾಡಿ, ಈ ಹಿಂದೆಯೂ ಕೊರೋನಾ ಉಲ್ಬಣವಾದಾಗ ಗ್ರಾಮ ಪಂಚಾಯತ ಸದಸ್ಯರ ನೇತೃತ್ವದಲ್ಲಿ ಎಲ್ಲ ಇಲಾಖೆಯ ಸಹಕಾರದಿಂದ ಕೆಲಸ ಮಾಡಿದ್ದೇವೆ. ಯಾರೂ ಭಯಪಡುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ. ಜ್ವರ, ಕೆಮ್ಮು, ನೆಗಡಿ ಹೆಚ್ಚು ದಿನ ಇದ್ದಲ್ಲಿ ಚಿಕಿತ್ಸೆ ಪಡೆಯಿರಿ ಎಂದರು.
ಹೋಮಿಯೋಪತಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಸಂಜೀವ ನಾರಪ್ಪನವರ ಮಾತನಾಡಿ, ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸಿ. ಮಲಗುವಾಗ ಒಂದು ಲೋಟ ಬಿಸಿನೀರು ಕುಡಿಯಿರಿ. ಮಳೆಗಾಲದಲ್ಲಿ ಡೆಂಗ್ಯು, ಚಿಕುನ್ ಗುನ್ಯಾ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳೋಣ ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ರಾಧಿಕಾ ಶಾಪೂರ ವಯಸ್ಕರ ಬಿಸಿಜಿ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ ಕಾರ್ಯದರ್ಶಿ ಪ್ರದೀಪ ಆಲೂರ ನಿರೂಪಿಸಿ ವಂದಿಸಿದರು.
ಸೋಮರಡ್ಡಿ ರಾಮೇನಹಳ್ಳಿ, ಯಲ್ಲರಡ್ಡಿ ಬಸವರಡ್ಡಿಯವರ, ಮೈಲಪ್ಪ ಹೊಸಮನಿ, ಶಂಕ್ರಮ್ಮ ನೀರಲಗಿ, ಮಂಜುಳಾ ಹೊಸಮನಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು, ಗ್ರಾ.ಪಂ ಸಿಬ್ಬಂದಿಗಳು ಇದ್ದರು.



