ವಿಜಯಸಾಕ್ಷಿ ಸುದ್ದಿ, ರೋಣ: ಹಜರತ್ ಮೆಹಬೂಬ ಸುಬ್ಹಾನಿ ಶರಣರ ತತ್ವ ಸಂದೇಶಗಳನ್ನು ಸರ್ವ ಜನಾಂಗದವರು ಮೈಗೂಡಿಸಿಕೊಳ್ಳಬೇಕು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ರಾತ್ರಿ ಜರುಗಿದ ಹಜರತ್ ಮೆಹಬೂಬ ಸುಬ್ಹಾನಿ ಶರಣರ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಡಿನ ಎಲ್ಲ ಧರ್ಮಗಳಲ್ಲಿಯೂ ಶರಣರು, ಸೂಫಿ ಸಂತರು ಜನ್ಮ ತಾಳಿ ಮಾನವನ ಏಕತೆಗೆ ಶ್ರಮಿಸಿದ್ದಾರೆ, ಎಲ್ಲ ಜನಾಂಗದವರು ಕೂಡಿ ಬಾಳಿ ಎಂಬ ಸಂದೇಶವನ್ನು ಸಾರಿದ್ದಾರೆ. ಶರಣರು, ಸೂಫಿ ಸಂತರು, ಮಠಾಧೀಶರು ಸಮಾಜದ ಏಕತೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ರೋಣ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗುವುದು ನಮ್ಮ ವಿಶೇಷತೆಯಾಗಿದೆ. ನಮ್ಮ ಹಿರಿಯರು ನಮಗೆ ಒಳ್ಳೆಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಇಂದಿನ ಯುವ ಪೀಳಿಗೆ ಶರಣರ, ಸೂಫಿ ಸಂತರ ಚಿಂತನೆಗಳನ್ನು ಒಪ್ಪಿಕೊಂಡು ಸಮಾಜದಲ್ಲಿ ಗೌರವಯುತ ಬದುಕನ್ನು ಕಟ್ಟಿಕೊಳ್ಳಬೇಕು. ಮುಸ್ಲಿಂ ಬಂಧುಗಳು ಮೆಹಬೂಬ ಸುಬ್ಹಾನಿಯವರ ಸವಿ ನೆನಪಿನಲ್ಲಿ ಗ್ಯಾರವಿ ಸಹ ಮಾಡುತ್ತಾರೆ, ಹಿಂದೂ ಬಾಂಧವರನ್ನು ಮನೆಗೆ ಆಹ್ವಾನಿಸಿ ಸಿಹಿ ಭೋಜನ ಉಣಬಡಿಸುತ್ತಾರೆ. ಇದು ನಮ್ಮ ನೆಲದ ಸಂಸ್ಕೃತಿಯಾಗಿದೆ ಎಂದರು.
ಹಜರತ್ ಸುಲೇಮಾನ ಶಾವಲಿ ದರ್ಗಾದ ಅಜ್ಜನವರು ಧಾರ್ಮಿಕ ಕಾರ್ಯ ನೆರವೇರಿಸಿದರು. ಉರುಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ಸಕ್ಕರೆ ನೈವೇದ್ಯ ಸಮರ್ಪಿಸಿ, ಪ್ರಸಾದ ಸ್ವೀಕರಿಸಿದರು.
ಅಂಜುಮನ್ ಅಧ್ಯಕ್ಷ ಬಾವಾಸಾಬ ಬೆಟಗೇರಿ, ಪುರಸಭೆ ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ಮಲೀಕ ಯಲಿಗಾರ, ಸಂಗಪ್ಪ ಜಿಡ್ಡಿಬಾಗಿಲ, ಬಸಪ್ಪ ಕುರಿ, ದುರ್ಗಪ್ಪ ಹಿರೇಮನಿ, ಮೌನೇಶ ಹಾದಿಮನಿ, ಹುಸೇನ ಭಾವಿ, ಆಶ್ಪಾಕ ಮದರಂಗಿ, ರೆಹಮಾನ್ ಕೊಪ್ಪಳ, ಮಾಬುಸಾಬ ರಾಜೆಖಾನ್, ರಫೀಕ ಬಾಡಿನ, ರಜಾಕ ಜಕ್ಕಲಿ, ಮಾಬುಸಾಬ ಮುಜಾವರ, ನಬಿಸಾಬ ಗುದಿಗನೂರ, ರಿಯಾಜ ರಾಜೆಖಾನ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಹಜರತ್ ಮೆಹಬೂಬ ಸುಬ್ಹಾನಿ ಶರಣರ ಧಾರ್ಮಿಕ ಕಾರ್ಯಗಳು ಜಗತ್ತಿನೆಲ್ಲೆಡೆ ಶ್ರದ್ಧಾ-ಭಕ್ತಿಯಿಂದ ನಡೆಯುತ್ತವೆ. ಮುಖ್ಯವಾಗಿ ನಮ್ಮ ಕನ್ನಡ ನೆಲದಲ್ಲಿ ಸರ್ವ ಜನಾಂಗದವರು ಸೇರಿ ಅತ್ಯಂತ ಭಕ್ತಿ ಮತ್ತು ಸಡಗರದಿಂದ ಉರುಸ್ ಧಾರ್ಮಿಕ ಕಾರ್ಯವನ್ನು ನೆರವೇರಿಸುತ್ತಾರೆ. ಇದಕ್ಕೆ ಕಾರಣ, ನಮ್ಮ ನೆಲದ ಗುಣಧರ್ಮ, ಏಕತೆ ಮತ್ತು ಸೌಹಾರ್ದತೆಯಾಗಿದೆ ಎಂಬುದನ್ನು ಮರೆಯಬಾರದು. ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲ ಸಮಾಜದವರು ಭಾಗಿಯಾಗಿ ಧಾರ್ಮಿಕ ಕಾರ್ಯಗಳಿಗೆ ವಿಶೇಷ ಅರ್ಥವನ್ನು ಕಲ್ಪಿಸಬೇಕು.
– ಜಿ.ಎಸ್. ಪಾಟೀಲ, ಶಾಸಕರು, ರೋಣ.



