ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಇ.ವಿ.ಎಂ. ಮತ್ತು ವಿ.ವಿ.ಪ್ಯಾಟ್ಸ್ ಗಳ 1ನೇ ಹಂತದ ರ್ಯಾಂಡಮೈಜೇಷನ್ ಕಾರ್ಯವನ್ನು ತಂತ್ರಾಂಶದ ಮೂಲಕ ರಾಷ್ಟ್ರೀಯ ರಾಜಕೀಯ ಪಕ್ಷಗಳ ಹಾಗೂ ಇತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮಾರ್ಚ್ 21ರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ದಿವ್ಯ ಪ್ರಭು ಅವರು ಜರುಗಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಇವಿಎಂ, ವಿ.ವಿ ಪ್ಯಾಟ್ಸ್ ಗಳ ರ್ಯಾಂಡಮೈಜೇಷನ್ ಕುರಿತು, ಮತದಾರ ಪಟ್ಟಿ, ಮತಗಟ್ಟೆಗಳ ಕುರಿತು, ಪ್ರಚಾರ ಸಂದರ್ಭದಲ್ಲಿ ಅನುಸರಿಸುವ ನಿಯಮಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಆರ್.ಎಂ. ಕಲ್ಯಾಣಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಕಾಶ ಹಳಿಯಾಳ, ಜಾತ್ಯಾತೀತ ಜನತಾದಳ ಪಕ್ಷದ ಗುರುರಾಜ ಹುಣಸಿಮರದ ಮತ್ತು ದೇವರಾಜ ಕಂಬಳಿ, ಆಮ್ ಆದ್ಮಿ ಪಕ್ಷದ ಅವಿನಾಶ, ಬಹುಜನ ಸಮಾಜವಾದಿ ಪಕ್ಷ ಶೋಭಾ ಬಳ್ಳಾರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷ ಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.



