ಚಿತ್ರದುರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡು ತಿಂಗಳ ಗರ್ಭಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಪುಷ್ಪ (25) ಎಂದು ಗುರುತಿಸಲಾಗಿದೆ. ಕಾಟಿಹಳ್ಳಿ ಗ್ರಾಮದ ಹರೀಶ್ ನಗರದ ಖಾಸಗಿ ಗಾರ್ಮೆಂಟ್ಸ್ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.
ಅದೇ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದ ಪುಷ್ಪ ಹಾಗೂ ಹರೀಶ್ ನಡುವೆ ಪ್ರೇಮಾಂಕುರವಾಗಿ ಬಳಿಕ ರಿಜಿಸ್ಟರ್ ಮ್ಯಾರೇಜ್ ನಡೆದಿತ್ತು. ಆದರೆ ಅನ್ಯಜಾತಿ ವಿವಾಹ ಎಂಬ ಕಾರಣಕ್ಕೆ ಹರೀಶ್ ಹಾಗೂ ಪುಷ್ಪ ಪೋಷಕರ ನಡುವೆ ತಾರತಮ್ಯ ಭಾವನೆ ಇದ್ದು, ಪುಷ್ಪ ಪೋಷಕರಿಗೆ ಹರೀಶ್ ಮನೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಎಲ್ಲವನ್ನೂ ಮೀರಿ ಪತಿಯೇ ಪರದೈವ ಎಂದು ನಂಬಿದ್ದ ಪುಷ್ಪ ಕಳೆದ ಎರಡು ವರ್ಷಗಳಿಂದ ಪತಿಯೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಳು. ದಂಪತಿಗೆ ಒಂದೂವರೆ ವರ್ಷದ ಗಂಡು ಮಗು ಇದ್ದು, ಪುಷ್ಪ ಇದೀಗ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಪದೇಪದೇ ಕೌಟುಂಬಿಕ ಕಲಹ ಉಂಟಾಗಿ, ವಿಚ್ಛೇದನದ ಮಟ್ಟಕ್ಕೂ ವಿವಾದ ತಲುಪಿತ್ತು. ಈ ಹಿನ್ನೆಲೆ ಎರಡು ದಿನಗಳ ಹಿಂದಷ್ಟೇ ದಂಪತಿ ಪೊಲೀಸ್ ಠಾಣೆಗೆ ತೆರಳಿದ್ದರು. ರಾಜಿಸಂಧಾನದ ಮೂಲಕ ಮನೆಗೆ ಮರಳಿದ್ದ ಪುಷ್ಪ ಬಳಿಕ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಮನೆಯಲ್ಲಿದ್ದ ಪತಿ ಹರೀಶ್ ಅಸ್ವಸ್ಥಳಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪುಷ್ಪ ಕೊನೆಯುಸಿರೆಳೆದಿದ್ದಾಳೆ. ವಿಷಯ ತಿಳಿದ ಪುಷ್ಪ ಪೋಷಕರು ಹಾಗೂ ಸಂಬಂಧಿಗಳು ಆಸ್ಪತ್ರೆಗೆ ದೌಡಾಯಿಸಿ, ಪತಿ ಹರೀಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕುಟುಂಬದಲ್ಲಿನ ಕೀಳರಿಮೆ ಹಾಗೂ ನಿರಂತರ ಕಿರುಕುಳವೇ ನಮ್ಮ ಮಗಳನ್ನು ಬಲಿ ಪಡೆದಿದೆ. ಇದನ್ನು ಮರೆಮಾಚಲು ಪುಷ್ಪಳನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲಳಲ್ಲ ಎಂದು ಆರೋಪಿಸಿದ್ದಾರೆ.ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹರೀಶ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಅಲ್ಲದೇ ಈ ಪ್ರಕರಣದ ಹಿಂದೆ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದ ಅಕ್ರಮ ಸಂಬಂಧವೂ ಕೌಟುಂಬಿಕ ಕಲಹಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ಅನುಮಾನಾಸ್ಪದ ಅಂಶಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗರ್ಭಿಣಿ ಸಾವಿಗೆ ನ್ಯಾಯ ಒದಗಿಸುವಂತೆ ಪುಷ್ಪ ಸಂಬಂಧಿಗಳು ಆಗ್ರಹಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



