ವಿಜಯಸಾಕ್ಷಿ ಸುದ್ದಿ, ಗದಗ: ಈ ಪ್ರದೇಶದಲ್ಲಿನ 36 ಮನೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಪ್ರತಿ ಮನೆಯು 6-7ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದರೊಂದಿಗೆ ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಗದಗ ನಗರದ ವಾರ್ಡ್ ನಂ.೩೦ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಸದರಿ ಮನೆಗಳು ಬಡವರಿಗೆ ವಿತರಿಸುವ ಮನೆಗಳಾಗಿದ್ದು, ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಮನೆ ನಿರ್ಮಿಸುವ ಮೂಲಕ ಬಡವರ ಸೇವೆ ಮಾಡುವಂತೆ ಸಚಿವರು ಸೂಚಿಸಿದರು.
ಈ ಪ್ರದೇಶದ ಹಲವರ ಬೇಡಿಕೆಯಾಗಿರುವ ರೇಷನ್ ಕಾರ್ಡ್ ಸಮಸ್ಯೆ ಕುರಿತಂತೆ ಮಾತನಾಡಿದ ಸಚಿವರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಬಿ.ಬಿ. ಅಸೂಟಿಯವರು ಈ ವೇಳೆ ನಮ್ಮ ಜೊತೆಗಿದ್ದಾರೆ. ನಿಮಗೆ ಎದುರಾಗಿರುವ ರೇಷನ್ ಕಾರ್ಡ್ ಕುರಿತ ಸಮಸ್ಯೆಯನ್ನು ಅವರು ಇನ್ನೊಂದು ತಿಂಗಳ ಒಳಗಾಗಿ ಸರಿಪಡಿಸಲಿದ್ದಾರೆ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಪ್ರಭು ಬುರಬುರೆ, ನಗರ ಸಭೆ ಸದಸ್ಯೆ ಪದ್ಮಾ ಕಟಗಿ, ಆಂಜನೇಯ ಕಟಗಿ ಸೇರಿದಂತೆ ಹಲವರು ಹಾಜರಿದ್ದರು.



