ದಾವಣಗೆರೆ:- ಸೈಬರ್ ಕ್ರೈಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಶಿಕ್ಷಕನ ಖಾತೆಗೆ 22.40 ಲಕ್ಷ ರೂ. ಹಣ ಕನ್ನ ಹಾಕಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಅರುಣ್ ಕುಮಾರ್ (35) ಬಂಧಿತ ಆರೋಪಿ. ಈತ ಹಾಸನದ ಬೇಲೂರು ಮೂಲದವ. ಆರೋಪಿ ದಾವಣಗೆರೆ ಮೂಲದ ಶಿಕ್ಷಕರೊಬ್ಬರಿಗೆ ಕೋರಿಯರ್ ಇದೆ ಎಂದು ಮಾ.12 ರಂದು ಫೋನ್ ಮಾಡಿದ್ದ. ಬಳಿಕ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಪಡೆದು, 22.40 ಲಕ್ಷ ರೂ. ಹಣ ಎಗರಿಸಿದ್ದ.
ಆರೋಪಿಯ ಬ್ಯಾಂಕ್ ಖಾತೆಯಲ್ಲಿ 19 ಲಕ್ಷ ರೂ. ಹಣವಿದ್ದು, ಖಾತೆಯನ್ನು ಸ್ಥಗಿತಗೊಳಿಸುವಂತೆ ಸೈಬರ್ ಕ್ರೈಂ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



