ಗದಗ: ಅಕ್ರಮ ಮಣ್ಣು ಗಣಿಗಾರಿಕೆಯಿಂದ ಉಂಟಾದ ಹೊಂಡದಲ್ಲಿ ಬಿದ್ದು ನರ್ಸಿಂಗ್ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಸಮೀಪದ ಕಣಗಿನಾಳ ರಸ್ತೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಆದಿತ್ಯ ಮೃತ ವಿದ್ಯಾರ್ಥಿ. ಅವರು ನರ್ಸಿಂಗ್ ಅಂತಿಮ ವರ್ಷದಲ್ಲಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದು, ಪದವಿ ಮುಗಿಸಿ ಮನೆಗೆ ತೆರಳಬೇಕಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ನಿನ್ನೆ ರಂಗಪಂಚಮಿ ಹಬ್ಬದ ಅಂಗವಾಗಿ ಬಣ್ಣ ಆಡಿದ ಬಳಿಕ ಸ್ನಾನ ಮಾಡಲು ಸುಮಾರು ಆರು–ಏಳು ಗೆಳೆಯರೊಂದಿಗೆ ಹೊಂಡಕ್ಕೆ ಇಳಿದಾಗ ಆದಿತ್ಯ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಕ್ರಮ ಮಣ್ಣು ಗಣಿಗಾರಿಕೆಯಿಂದ ನಿರ್ಮಾಣವಾದ ಹೊಂಡಗಳೇ ಈ ದುರ್ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೂ ಮೊದಲು ಶ್ಯಾಗೋಟಿ, ಚಿಕ್ಕಹಂದಿಗೋಳ ಹಾಗೂ ಕಳಸಾಪೂರ ಗ್ರಾಮಗಳಲ್ಲಿ ಇಂತಹ ಹೊಂಡಗಳಲ್ಲಿ ಬಿದ್ದು ಮಕ್ಕಳು ಹಾಗೂ ಯುವಕರು ಸಾವನ್ನಪ್ಪಿದ ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ.
ಆದರೂ ಅಕ್ರಮ ಗಣಿಗಾರಿಕೆಗೆ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ಕ್ರಮ ಕೈಗೊಳ್ಳದೇ ಇರುವುದರಿಂದ ಈ ಸಾವಿಗೆ ಅಧಿಕಾರಿಗಳೇ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿ ಮುಳುಗಿದ್ದು, ಮಗನ ಬಗ್ಗೆ ಹಲವು ಕನಸು ಕಂಡಿದ್ದ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತ ತಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದ್ದು, ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



