ರಾಯಚೂರು:- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ಜರುಗಿದೆ. ಅನೈತಿಕ ಸಂಬಂಧದಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಿ ಮೃತನ ಕಡೆಯವರು ಮಹಿಳೆಯೊರ್ವಳನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ.
ಬಸವರಾಜ್ ನಾಯಕ, ಯಂಕಮ್ಮ, ದುರ್ಗಮ್ಮ ಮತ್ತು ರೇಣುಕಾ ಸೇರಿ ಇತರರಿಂದ ಹಲ್ಲೆ ನಡೆದಿದೆ. 20 ದಿನಗಳ ಹಿಂದೆ ರಂಗಪ್ಪ ಎಂಬಾತ ಮೂರ್ಛೆ ರೋಗದಿಂದ ಸಾವನ್ನಪ್ಪಿದ್ದರು. ಆತನ ಸಾವಿಗೆ ಈ ಮಹಿಳೆ ಕಾರಣ ಎಂದು ಶಂಕಿಸಿದ್ದಾರೆ. ಮಹಿಳೆಯ ಮನೆಗೆ ಬಂದು ಆಕೆಯ ಮನೆಯ ಎದುರಿಗಿದ್ದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ನೂರಾರು ಜನರ ಮುಂದೆಯೇ ದೌರ್ಜನ್ಯ ಎಸಗಿದ್ದರೂ ಕೂಡ ಯಾರು ರಕ್ಷಣೆಗೆ ಮುಂದಾಗಿಲ್ಲ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸ್ಥಳೀಯ ಪೊಲೀಸರು ಧಾವಿಸಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಘಟನೆ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.



