ಗದಗ: ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯತ್ ಮಾನವೀಯ ಸ್ಪಂದನೆ ನೀಡಿದೆ. ಸರ್ಕಾರಕ್ಕೆ ನಿಧಿಯನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ 30×40 ನಿವೇಶನ ನೀಡುವ ನಿರ್ಧಾರವನ್ನು ಗ್ರಾಪಂ ಕೈಗೊಂಡಿದೆ.
ಲಕ್ಕುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಚಪ್ಪ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಕುರಿತು ಅಧಿಕೃತ ಠರಾವು ಅಂಗೀಕರಿಸಲಾಯಿತು. ಬಡ ಕುಟುಂಬಕ್ಕೆ ನಿವೇಶನ ಹಾಗೂ ಮನೆ ದೊರಕಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ವರದಿಗಳು ಪ್ರಕಟವಾಗುತ್ತಿದ್ದವು. ಆ ವರದಿಗಳ ಫಲವಾಗಿ ಇದೀಗ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ಈ ವೇಳೆ ರಿತ್ತಿ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಗೆ ಗ್ರಾಮ ಪಂಚಾಯತಿಯಿಂದ ಸೈಟ್ ಗಿಫ್ಟ್ ನೀಡಲಾಗಿದೆ ಎಂಬ ವಿಚಾರ ಕುಟುಂಬದಲ್ಲಿ ಅಪಾರ ಸಂತೋಷ ಮೂಡಿಸಿದೆ. ಪ್ರಜ್ವಲ್ ಹಾಗೂ ಅವರ ತಾಯಿ ಕಸ್ತೂರೆವ್ವ ರಿತ್ತಿ ಅವರು ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನೂ ವಿಶೇಷವಾಗಿ, ಜನವರಿ 26ರಂದು ಕುಟುಂಬಕ್ಕೆ ಅಧಿಕೃತವಾಗಿ ಜಾಗದ ಪ್ರಮಾಣ ಪತ್ರ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚಾಯತಿ ಮೂಲಗಳು ತಿಳಿಸಿವೆ.
ಈ ಪ್ರಕರಣವನ್ನು ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಕುಟುಂಬದ ಭವಿಷ್ಯ ಭದ್ರತೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ತಿಳಿಸಿದೆ. ಮುಂದೆ ಸಚಿವರು ಹಾಗೂ ಶಾಸಕರ ಅನುದಾನದಲ್ಲಿ ಮನೆ ನಿರ್ಮಿಸಿಕೊಡುವ ಭರವಸೆ ಕೂಡ ನೀಡಲಾಗಿದೆ.
ಇನ್ನಷ್ಟು ಆಶ್ವಾಸಕ ಬೆಳವಣಿಗೆಯಾಗಿ, ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡುವುದಾಗಿ ಹಾಗೂ ತಾಯಿ ಗಂಗಮ್ಮ ಅವರಿಗೆ ಉದ್ಯೋಗ ಕಲ್ಪಿಸುವುದಾಗಿ ಪಂಚಾಯತ್ ಭರವಸೆ ನೀಡಿದೆ. ಈ ಕ್ರಮ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ.
ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆಯನ್ನು ಮಕ್ಕಳಿಗೆ ಮಾದರಿಯಾಗಿ ತೋರಿಸುವ ಉದ್ದೇಶದಿಂದ, ಗ್ರಾಮ ಪಂಚಾಯತ್ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮದ ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರಜ್ವಲ್ ರಿತ್ತಿ ಅವರ ಫೋಟೋ ಅಳವಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಜ್ವಲ್ ರಿತ್ತಿ ಅವರ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ನಡೆ ಮಕ್ಕಳಲ್ಲಿ ಸದುಪಯೋಗಕಾರಿ ಮೌಲ್ಯಗಳನ್ನು ಬೆಳೆಸಲಿದೆ ಎಂಬ ನಂಬಿಕೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. “ಈ ಫೋಟೋ ನೋಡಿ ಮಕ್ಕಳಲ್ಲೂ ಪ್ರಾಮಾಣಿಕತೆ ಬೆಳೆಸಲಿ” ಎಂಬ ಉದ್ದೇಶವೇ ಈ ನಿರ್ಧಾರದ ಮೂಲ ಕಾರಣ ಎಂದು ಗ್ರಾಮ ಪಂಚಾಯತ್ ಸದಸ್ಯರು ಹೇಳಿದ್ದಾರೆ.



