ಶಿವಮೊಗ್ಗ:- ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ ಪತಿ ಸಾವನ್ನಪ್ಪಿರುವ ವಿಷಯ ತಿಳಿದು ಪತ್ನಿಯೂ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಬೆಸಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿಲ್ಲೆ ಕ್ಯಾತರ ಕ್ಯಾಂಪ್ನಲ್ಲಿ ಜರುಗಿದೆ. ಈ ಮೂಲಕ ಸಾವಿನಲ್ಲೂ ಗಂಡ-ಹೆಂಡತಿ ಒಂದಾಗಿದ್ದಾರೆ.
25 ವರ್ಷದ ಮಂಜುನಾಥ್, 21 ವರ್ಷದ ಅಮೃತ ಮೃತ ದುರ್ದೈವಿಗಳು. ಮಂಗಳವಾರ ಶಿಕಾರಿಪುರದ ಬಳಿ ಮಂಜುನಾಥ್ಗೆ ಅಪಘಾತವಾಗಿತ್ತು. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಪತಿ ಮಂಜುನಾಥ್ ಸಾವಿನಿಂದ ಮನನೊಂದ ಪತ್ನಿ ಅಮೃತ ಮನೆಗೆ ಬಂದು ತನ್ನ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಜುನಾಥ್ ಹಾಗೂ ಅಮೃತ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ದಂಪತಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.



