ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬೇಸಿಗೆಯ ತಾಪಮಾನ ಜನರನ್ನು ಕಂಗಾಲಾಗಿಸಿದೆ.
ರಾಜಧಾನಿ ಬೆಂಗಳೂರುನಲ್ಲಿ ಇಂದು ಗರಿಷ್ಠ ತಾಪಮಾನ 34°C ರಿಂದ 35°C ತಲುಪುವ ಸಾಧ್ಯತೆಯಿದೆ. ಸಂಜೆ ವೇಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದರೂ ಉಷ್ಣಾಂಶದಲ್ಲಿ ಹೆಚ್ಚು ಇಳಿಕೆ ಕಾಣುವ ಲಕ್ಷಣಗಳಿಲ್ಲ.
ಉತ್ತರ ಕರ್ನಾಟಕದ ಕಲ್ಬುರ್ಗಿ, ರಾಯಚೂರು ಹಾಗೂ ಬಳ್ಳಾರಿ ಪ್ರದೇಶಗಳಲ್ಲಿ ತಾಪಮಾನ 40°C ಗಡಿ ದಾಟುತ್ತಿದೆ. ಈ ಭಾಗಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹೊರಗಡೆ ಹೋಗದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಭಾಗಗಳಾದ ಮಂಗಳೂರು ಮತ್ತು ಉಡುಪಿಗಳಲ್ಲಿ ತಾಪಮಾನ ಜೊತೆಗೆ ಆರ್ದ್ರತೆ ಹೆಚ್ಚಾಗಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಗರಿಷ್ಠ ತಾಪಮಾನ ಸುಮಾರು 36°C ದಾಖಲಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಲೆನಾಡು ಪ್ರದೇಶಗಳಾದ ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಸಂಜೆ ವೇಳೆಗೆ ತುಂತುರು ಮಳೆಯ ಸಾಧ್ಯತೆ ಇದ್ದರೂ ಅದು ಅತಿ ವಿರಳವಾಗಿದೆ.
ಇನ್ನು ಗದಗನಲ್ಲಿ ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 39°C ಹಾಗೂ ಕನಿಷ್ಠ 24°C ಇರಲಿದೆ. ಮೋಡಗಳ ಸುಳಿವಿಲ್ಲದೆ ತೀವ್ರ ಬಿಸಿಲು ಕಾಡಲಿದೆ.
ಹಾವೇರಿಯಲ್ಲಿ ಗರಿಷ್ಠ 38°C ಹಾಗೂ ಕನಿಷ್ಠ 23°C ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಕಡಿಮೆ ಇರುವುದರಿಂದ ಸೆಕೆ ಹೆಚ್ಚಾಗಿ ಅನುಭವವಾಗಲಿದೆ.
ಚಿಕ್ಕಮಗಳೂರುನಲ್ಲಿ ಗರಿಷ್ಠ 33°C ಹಾಗೂ ಕನಿಷ್ಠ 19°C ತಾಪಮಾನ ಇರಲಿದ್ದು, ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ. ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಬಹುದು. ಹಾಸನದಲ್ಲಿ ಸಾಮಾನ್ಯ ಬಿಸಿಲು ಮತ್ತು ಶುಷ್ಕ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ 34°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಮಳೆಯ ಯಾವುದೇ ಸೂಚನೆ ಇಲ್ಲ.



