ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಆಧ್ಯಾತ್ಮಿಕ ತಳಹದಿಯನ್ನು ಹೊಂದಿರುವ ಭಾರತ ಶರಣರು, ಸಂತರು, ಮಹಾತ್ಮರ ಪರಂಪರೆ ಹೊಂದಿರುವ ಸೌಹಾರ್ದಯುತ ರಾಷ್ಟ್ರವಾಗಿದೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ನರೇಗಲ್ಲ ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಸರ್ವಧರ್ಮ ಸಮನ್ವಯಾವತಾರಿಗಳಾಗಿ ಧರ್ಮ ಸಹಿಷ್ಣುತೆಗಾಗಿ ಈ ಜಗತ್ತಿಗೆ ಅವತರಿಸಿ ಬಂದು ಎಲ್ಲರನ್ನೂ ಪ್ರೀತಿಸಿ, ಗೌರವಿಸುವ ಗುಣ ಹೊಂದಿರುವ ಈ ಧರ್ಮದ ಸ್ಥಾಪನೆಯ ಮೂಲಕ ಅವರು ಧರ್ಮಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು. ಆದ್ದರಿಂದ ಶ್ರೀ ರೇಣುಕರು ಎಂದಿಗೂ ಜಗದ್ವಂದ್ಯರು. ಶ್ರೀ ರೇಣುಕರು ತೋರಿದ ಲೀಲೆಗಳು ಅಪಾರ. ಅವುಗಳನ್ನು ಅರಿಯಬೇಕೆಂದರೆ ಚರಿತ್ರೆಯನ್ನು ಓದಬೇಕು. ಅವರ ಅವತಾರದಿಂದ ಈ ಭೂಮಿ ಪಾವನವಾಯಿತು. ಶ್ರೀ ಜಗದ್ಗುರು ರೇವಣಶಿದ್ದರಾಗಿ ಅವತರಿಸಿದ ರೇಣುಕಾಚಾರ್ಯರು ವೀರಶೈವ ಧರ್ಮದ ಯುಗ ಪ್ರವರ್ತಕರಾಗಿ ಈ ನಾಡಿನ ಜನರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಿದರು. ಅಗಸ್ತ್ಯ ಮುನಿಗೆ ಶಕ್ತಿ ವಿಶಿಷ್ಠಾದ್ವೈತ ಸಿದ್ಧಾಂತವನ್ನು ಬೋಧಿಸಿದರು. ಇದನ್ನೇ ನಾವಿಂದು ಸಿದ್ಧಾಂತ ಶಿಖಾಮಣಿಯೆಂದು ಅಧ್ಯಯನ ಮಾಡುತ್ತೇವೆ. ಈ ಗ್ರಂಥದಲ್ಲಿ ಜೀವನಕ್ಕೆ ಬೇಕಾದ ಅನೇಕ ಮೌಲ್ಯಗಳಿವೆ ಎಂದರು.
ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿಬಾಯಿ ಧನ್ನೂರ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಈಶ್ವರ ಬೆಟಗೇರಿ, ಡಾ. ಆರ್.ಕೆ. ಗಚ್ಚಿನಮಠ, ಶಿವಾನಂದ ಹಿರೇಮಠ, ನಿವೃತ್ತ ಶಿಕ್ಷಕಿ ರತ್ನಮ್ಮ ಧಡೆಸೂರಮಠ, ಮುಖೋಪಾಧ್ಯಾಯೆ ನಿರ್ಮಲಾ ಹಿರೇಮಠ, ಎ.ಎಮ್. ಬೆಟಗೇರಿ, ಪ್ರಶಾಂತ ಹಿರೇಮಠ, ಮೈತ್ರಾ ನಂದಿ, ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ರೇಣುಕಮಠ ಸ್ವಾಗತಿಸಿದರು. ಎ.ಎಂ. ಆದಿ ನಿರೂಪಿಸಿದರು. ರೇಣುಕಾ ರಾಮಣ್ಣವರ ವಂದಿಸಿದರು.



