ವಿಜಯಸಾಕ್ಷಿ ಸುದ್ದಿ, ಗದಗ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊAಕುಗಳನ್ನು ತಿದ್ದಿದ್ದಾರೆ. ಕೀರ್ತನಕಾರರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಅವರು ಕನ್ನಡ ನಾಡು-ನುಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ತೋಂಟದಾರ್ಯ ಮಠದಲ್ಲಿ ಜರುಗಿದ 2720ನೇ ಶಿವಾನುಭವ ಕಾರ್ಯಕ್ರಮದದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಕನ್ನಡ ನಾಡ-ನುಡಿ, ಸಂಸ್ಕೃತಿಯಲ್ಲಿ ಬೆರೆತು ಹೋದ ಒಬ್ಬ ಶ್ರೇಷ್ಠ ದಾಸವರೇಣ್ಯ ಕನಕದಾಸರು. ಕನಕದಾಸರ ಬದುಕು ಮತ್ತು ಆದರ್ಶಗಳು ಸಾರ್ವಕಾಲಿಕ. ಶರಣರ ವಚನ ಮತ್ತು ದಾಸರ ಪದಗಳು ಸಮಾಜದಲ್ಲಿ ಜಾತಿ, ಮತ, ಪಂಥ ಬೇಧಗಳನ್ನು ಅಳಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ ಎಂದರು.
ಕನಕದಾಸ ಜಯಂತಿಯ ನಿಮಿತ್ತ `ಸಂತ ಶ್ರೇಷ್ಠ ಕನಕದಾಸರು’ ಎಂಬ ವಿಷಯದ ಕುರಿತು ಧಾರವಾಡ ಆಕಾಶವಾಣಿ ಕಲಾವಿದರಾದ ಚಂದ್ರಶೇಖರ ವಡಿಗೇರಿಯವರು ಅವರ ಕೀರ್ತನೆಗಳ, ಮುಂಡಿಗೆಗಳ, ಕೃತಿಗಳ ಕುರಿತು ತಮ್ಮ ಉಪನ್ಯಾಸದಲ್ಲಿ ಬೆಳಕು ಚೆಲ್ಲಿದರು.
`ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಈ ವಿಷಯವಾಗಿ ಗದುಗಿನ ಕೆ.ವಿ.ಎಸ್.ಆರ್. ಕಾಲೇಜಿನ ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಮಾತನಾಡಿ, ನಿತ್ಯ ಜೀವನದಲ್ಲಿ ಹಾಸ್ಯ ಹೇಗೆ ಹಾಸುಹೊಕ್ಕಾಗಿದೆ ಎಂದು ತಮ್ಮ ಮನೆಯಿಂದ ಹಿಡಿದು ಸುತ್ತಮುತ್ತಲಿನ ವಾತಾವರಣದಲ್ಲಿ ಹಾಸ್ಯ ಹೇಗೆ ಕಂಡುಬರುತ್ತದೆ ಎಂಬುದನ್ನು ತಿಳಿಸುತ್ತಾ ನಗೆಯ ಹೊನಲನ್ನು ಹರಿಸಿದರು. ನಗು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಗಬೇಕು ಮತ್ತೆ ಮತ್ತೆ ನಗಬೇಕು ಎಂದು ಹೇಳಿದರು.
ದೆಹಲಿಯಯ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬಾಲ ಕವಿಯತ್ರಿ ಪ್ರಣತಿ ರಾಜೇಂದ್ರ ಗಡಾದ ಇವರನ್ನು ಮಕ್ಕಳ ದಿನಾಚರಣೆ ನಿಮಿತ್ತ ಸನ್ಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರವರು ಸಂಗೀತ ಸೇವೆ ನೆರವೇರಿಸಿದರು. ಧರ್ಮ ಗ್ರಂಥ ಪಠಣವನ್ನು ಸಂಕೇತ ಎಸ್.ತಕ್ಕಡಿ ಹಾಗೂ ವಚನ ಚಿಂತನವನ್ನು ಭುವನ್ ಎಸ್. ಅಕ್ಕಮ್ಮನವರ ಮಾಡಿದರು. ದಾಸೋಹ ಸೇವೆಯನ್ನು ಶರಣ ಹುಚ್ಚಣ್ಣ ಶಹಾಪೂರ, ಹಾಲೇಶ್ವರ ಟ್ರೇಡಿಂಗ್ ಕಂಪನಿ ಗದಗ ಇವರು ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಶರಣ ಫಕ್ಕೀರಪ್ಪ ಹೆಬಸೂರ ಉಪಸ್ಥಿತರಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿಗಳಾದ ವೀರಣ್ಣ ಗೋಟಡಕಿ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸನ್ಮಾನಿತರನ್ನು ಪರಿಚಯಿಸಿದರು. ವಿಧ್ಯಾ ಗಂಜಿಹಾಳ ಸ್ವಾಗತಿಸಿದರೆ, ಗೌರಕ್ಕ ಬಡಿಗಣ್ಣವರ ನಿರೂಪಿಸಿದರು.



